
ವಿಶಾಖಪಟ್ಟಣ.ನ.6:– ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಬಸ್ಗೆ ಬೆಂಕಿ ಹೊತ್ತಿಕೊಂಡ 19 ಜನರು ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ, ಮತ್ತೊಂದು ಸರ್ಕಾರಿ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಇಂದು ಮುಂಜಾನೆ ವಿಶಾಖಪಟ್ಟಣಂನಿಂದ ಸುಮಾರು 35 ಪ್ರಯಾಣಿಕರೊಂದಿಗೆ ಹೊರಟ ಒಡಿಶಾ ಆರ್ಟಿಸಿ ಬಸ್ ಜೈಪುರ ತಲುಪಬೇಕಿದ್ದ ಬಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.ಒಡಿಶಾ ಆರ್ಟಿಸಿ ಬಸ್ಗೆ ಬೆಂಕಿ ಹೊತ್ತಿಕೊಂಡ ನಂತರ ಪ್ರಯಾಣಿಕರಲ್ಲಿ ಸಾಕಷ್ಟು ಗೊಂದಲ,ಭಯ ಉಂಟಾಗಿ ಕಂಗೆಟ್ಟಿದ್ದಾರೆ.
ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಪಚಿಪೆಂಟಾ ಮಂಡಲದ ರೊಡ್ಡಾ ವಲಸಾ ಬಳಿ ಇಂದು ಬೆಳಿಗ್ಗೆ ಘಾಟ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಗಳಲ್ಲಿ, ಜ್ವಾಲೆಗಳು ಬಸ್ನಾದ್ಯಂತ ಹರಡಿದೆ.ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.
ರೊಡ್ಡವಲಸದಲ್ಲಿ ಘಾಟ್ ರಸ್ತೆ ಹತ್ತುವಾಗ, ಎಂಜಿನ್ ಒತ್ತಡಕ್ಕೆ ಒಳಗಾಗಿ ಆರಂಭದಲ್ಲಿ ಹೊಗೆ ಹೊರಸೂಸಿದೆ. ಇದು ಚಾಲಕನಿಗೆ ಎಚ್ಚರಿಕೆ ನೀಡಿದೆ. ಚಾಲಕನ ಸಮಯಪ್ರಜ್ಞೆಯಿಂದ ಸಮಯಕ್ಕೆ ಸರಿಯಾಗಿ ಬಸ್ ನಿಲ್ಲಿಸಿದ್ದರಿಂದ ಪ್ರಯಾಣಿಕರು ತಕ್ಷಣ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ .
ಮಾಹಿತಿ ಪಡೆದ ಸಾಲೂರು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಿಸಿದರು. ಸಕಾಲಿಕ ಕ್ರಮದಿಂದಾಗಿ ದೊಡ್ಡ ಅಪಘಾತ ತಪ್ಪಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದರಿಂದ ಆರ್ಟಿಸಿ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

























