ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದಲ್ಲಿ ಮನಸೂರೆಗೊಂಡ ಕಲಾ ಸಾಂಸ್ಕೃತಿಕ ವೈಭವ

ಸುಳ್ಯ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ವತಿಯಿಂದ ಕಲಾ ಸಾಂಸ್ಕೃತಿಕ ವೈಭವ ಬನಾರಿಯ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.
ಶ್ರೀ ಗೋಪಾಲಕೃಷ್ಣ ದೇವರ ಪೂಜೆ, ಶ್ರೀಮದ್ಭಗವದ್ಗೀತಾ ಪಾರಾಯಣದೊಂದಿಗೆ ಆರಂಭಗೊಂಡ ಶ್ರೀ ಶಾರದಾಂಬಾ ಕುಣಿತ ಭಜನಾ ತಂಡ ಬೆಳ್ಳಿಪ್ಪಾಡಿ ಇವರಿಂದ ಕುಣಿತ ಭಜನೆ ನಡೆಯಿತು. ಬಳಿಕ ಯಕ್ಷಗಾನ ಚಿಂತನ ಮಂಥನ ಕಾರ್ಯಕ್ರಮ ಪ್ರಾತ್ಯಕ್ಷಕಿಕೆ ನಡೆಯಿತು. ಕಲಾ ವಿದ್ವಾಂಸ ವೆಂಕಟರಾಮ ಭಟ್ಟ ಸುಳ್ಯ ಸಾರಥ್ಯದಲ್ಲಿ ಛಂದಸ್ಸು ತಾಳ ರಾಗ ಮಟ್ಟುಗಳ ವಿಶ್ಲೇಷಣೆ ವಿವರಣೆಗಳೊಂದಿಗೆ ಮತ್ತು ಹಿರಿಯ ಅರ್ಥಧಾರಿ ಗಣರಾಜ ಕುಂಬಳೆಯವರಿಂದ ಹಿಮ್ಮೇಳ ಮುಮ್ಮೇಳ ಸಾಂಗತ್ಯ ಹಾಗೂ ಅರ್ಥಗಾರಿಕೆಯಲ್ಲಿ ’ಶ್ರುತಿಯ’ ಪಾತ್ರದ ವಿಚಾರ ಮಂಥನ ನಡೆಯಿತು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಮಾತನಾಡಿದರು. ಪ್ರಾತ್ಯಕ್ಷಿಕೆಯೊಂದಿಗೆ ನಡೆದ ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ, ರಚನಾ ಚಿದ್ಗಲ್ ಮದ್ದಳೆಯಲ್ಲಿ ಲಕ್ಷೀಶ ಶಗ್ರೀತ್ತಾಯ ಪಂಜ, ಚೆಂಡೆ ವಾದನದಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ ಮತ್ತು ಚಕ್ರ ತಾಳದಲ್ಲಿ ಅಗಸ್ತ್ಯ ಕುಲ್ಕುಂದ ಸಹಕರಿಸಿದರು. ವಿಶ್ವ ವಿನೋದ ಬನಾರಿ, ಸದಾಶಿವ ರೈ ಬೆಳ್ಳಿಪ್ಪಾಡಿ , ಎಂ.ಅಪ್ಪಯ್ಯ ಮಣಿಯಾಣಿ, ವೆಂಕಟ್ರಮಣ ಮಾಸ್ತರ್ ದೇಲಂಪಾಡಿ,ನಾರಾಯಣ ತೋರಣಗಂಡಿ,ರಾಮಣ್ಣ ಮಾಸ್ತರ್ ದೇಲಂಪಾಡಿ,ಯು.ಬಿ.ಶ್ರೀನಿಲಯ, ಸಂವಾದದಲ್ಲಿ ಭಾಗವಹಿಸಿದರು.
ಸಂಜೆ ಸರೋಜಿನಿ ಬನಾರಿ ನಿರ್ದೇಶನದಲ್ಲಿ ಕಲಾ ಸಂಘದ ವಿದ್ಯಾರ್ಥಿಗಳಿಂದ ಶ್ರೀಕೃಷ್ಣ ಬಾಲ ಲೀಲೆ ಕಾಳಿಂಗ ಮರ್ಧನ, ಸುದರ್ಶನ ಗರ್ವಭಂಗ, ದಕ್ಷಯಜ್ಞ ಯಕ್ಷಗಾನ ಬಯಲಾಟವು ನಡೆಯಿತು. ಬಯಲಾಟದ ಹಿಮ್ಮೆಳದಲ್ಲಿ ಭಾಗವತರಾಗಿ ರಚನ ಚಿದ್ಗಲ್, ವಿದ್ಯಾಶ್ರೀ ಆಚಾರ್ಯ ಈಶ್ವರ ಮಂಗಲ ,ಸಾಯಿ ನಕ್ಷತ್ರ ಮಜಿಕೋಡಿ ಭಾಗವಹಿಸಿದರು. ಚಂಡೆ, ಮದ್ದಳೆ, ಚಕ್ರ ತಾಳದಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ, ಶ್ರೀಧರ ಆಚಾರ್ಯ ಈಶ್ವರಮಂಗಲ ,ಲಕ್ಷ್ಮೀಶ ಶಗ್ರಿತ್ತಾಯ , ವಿಷ್ಣು ಶರಣ ಬನಾರಿ ,ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ , ನಾಗೇಶ ಆಚಾರ್ಯ, ಶ್ರೀದೇವ್ ಆಚಾರ್ಯ ಸಹಕರಿಸಿದರು. ರಂಗ ಸುರಭಿ ಕಲ್ಮಡ್ಕದ ಪ್ರಬಂಧಕ ಮಹಾಬಲ ಕಲ್ಮಡ್ಕ ಮತ್ತು ಹಿರಿಯ ಭಾಗವತ ಹೊಸಮೂಲೆ ಗಣೇಶ ಭಟ್ ಅವರನ್ನು ಈ ಸಂದರ್ಭದಲ್ಲಿ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಿನೋದ ಬನಾರಿ ಅವರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಪುಸ್ತಕ ನೀಡಿ ಗೌರವಿಸಲಾಯಿತು. ನಾರಾಯಣ ದೇಲಂಪಾಡಿ ಶ್ರೀಗೌರಿ ಬನ್ನಡ್ಕ , ಯಶಸ್ವಿ ಬನಾರಿ, ಕಾರ್ಯಕ್ರಮ ನಿರೂಪಿಸಿ ನಂದಕಿಶೋರ ಬನಾರಿ ವಂದಿಸಿದರು.