
ಸಂಜೆವಾಣಿ ನ್ಯೂಸ್
ಮೈಸೂರು: ಅ.08:- ಮಹರ್ಷಿ ವಾಲ್ಮೀಕಿ ಅವರು ಬಡತನದಲ್ಲಿ ಹುಟ್ಟಿ ತಮ್ಮ ತಪಸ್ಸಿನ ಮೂಲಕ ಅಸಾಧಾರಣವಾದ ಬುದ್ಧಿ ಶಕ್ತಿಯನ್ನು ಗೆದ್ದವರು. ತಮ್ಮ ಬುದ್ಧಿ ಶಕ್ತಿಯ ಮೂಲಕ ಜ್ಞಾನವನ್ನು ಕೊಟ್ಟವರು. ಇಡೀ ಪ್ರಪಂಚಕ್ಕೆ ಧರ್ಮದ ಮೌಲ್ಯವನ್ನು, ನೈತಿಕತೆಯನ್ನು ನೀಡಿದವರು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಮೈಸೂರು ನಗರ ಮತ್ತು ತಾಲ್ಲೂಕು ನಾಯಕ ಜನಾಂಗದ ಸಂಘಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ದೀಪ ಬೆಳಗಿಸಿ, ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು. ವಿಧಾನ ಸೌಧದಲ್ಲಿ 3 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಇಡೀ ಪ್ರಪಂಚವನ್ನು ಒಳಗೊಂಡ ದೊಡ್ಡ ರಾಮಾಯಣವನ್ನು ರಚಿಸಿದವರು ವಾಲ್ಮೀಕಿ ಮಹರ್ಷಿಗಳು. ಜ್ಞಾನ ಶಕ್ತಿಯ ಮೂಲಕ ಮೇಧಾವಿ ಯಾದವರು. ರಾಮನನ್ನು ರಾಮಾಯಣದ ಮೂಲಕ ಸೃಷ್ಟಿ ಮಾಡಿದವರು ಹಾಗೂ ನೈತಿಕ ವಿಷಯವನ್ನು ರಾಮಾಯಣದಲ್ಲಿ ಧರ್ಮ ಪಾಲನೆ ಮಾಡಿದವರು. ಸಾಮಾಜಿಕ ಆರ್ಥಿಕ, ಸಮಾನತೆಯ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯವನ್ನು ಬಿತ್ತಿದವರು ಮಹರ್ಷಿಗಳು ಎಂದು ತಿಳಿಸಿದರು.
ಮೂಡ ನಂಬಿಕೆಗಳಿಗೆ ಒಳಗಾಗದೆ , ಜಾತಿ ಜಾತಿ ಎಂದು ಹೊಡೆದಾಡದೇ ಎಲ್ಲರೂ ಸಮಾನವಾಗಿ ಬದುಕಬೇಕು, ಜಾತಿ ರಹಿತವಾದಂತಹ ಸಮಾಜವನ್ನು ಕಟ್ಟಬೇಕು, ಮಹರ್ಷಿ ವಾಲ್ಮೀಕಿಯವರು , ಡಾ. ಬಿ. ಆರ್ ಅಂಬೇಡ್ಕರ್, ಹಾಗೂ ಬುದ್ಧ ಅವರು ಸಹ ನಮಗೆ ಅದನ್ನೇ ಹೇಳಿದ್ದಾರೆ ಅದನ್ನು ನಾವು ನಮ್ಮ ಜೀವನದಲ್ಲಿ ಅರ್ಥ ಮಾಡಿಕೊಂಡು ಒಗ್ಗಟ್ಟಿನಿಂದ ಬದುಕಬೇಕು. ಅವರು ಹೇಳಿರುವಂತಹ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಮೂಢನಂಬಿಕೆಯಿಂದ ಹೊರಬರಬೇಕು ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಕೆಲವೇ ಜಾತಿ, ಧರ್ಮದ ಆದಾರಲ್ಲಿ ಮನುಷ್ಯ ಬದುಕಲು ಸಾಧ್ಯವಿಲ್ಲ, ಶಿಕ್ಷಣ ನಮ್ಮ ಮೂಲ ಮುದ್ರೆಯಾಗಬೇಕು ಶಿಕ್ಷಣ ಪಡೆದು ಸಮಾಜವನ್ನು ಮುನ್ನಡೆಸಬೇಕು. ಇತಿಹಾಸವನ್ನು ತಿಳಿದು ಬದುಕಿದಾಗ ಸಮುದಾಯವು ಮುಂದೆ ಬರುತ್ತದೆ ಇದರ ಜೊತೆ ಸರ್ಕಾರದ ಯೋಜನೆಗಳನ್ನು ಸಮುದಾಯ ಜನರು ಪಡೆದುಕೊಳ್ಳಬೇಕು, ಸಮಾಜದಲ್ಲಿ ಸಮಾನತೆಗಾಗಿ ನಮ್ಮ ಸರಕಾರ ಅನೇಕ ಯೋಜನೆಗಳನ್ನು ನೀಡುತ್ತಿದೆ ಇದರಲ್ಲಿ ತಮ್ಮ ಏಳ್ಗೆಗಾಗಿ ಯಾವ ಯೋಜನೆಯಿದೆ ಎಂಬುದನ್ನು ಅರಿತು ಪಡೆದುಕೊಂಡರೆ ಮಾತ್ರ ಸಮುದಾಯಗಳ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ ತಮ್ಮ ಜ್ಞಾನದ ಮೂಲಕ ಸುಜ್ಞಾನದ ಬೆಳಕನ್ನು ನೀಡಿದ ಮಹಾನ್ ಜ್ಞಾನಿ ಮಹರ್ಷಿ ವಾಲ್ಮೀಕಿ. ರಾಮಾಯಣ ಎಂಬ ಮಹಾ ಕಾವ್ಯವನ್ನು ಬರೆಯುವುದರ ಮೂಲಕ ಅಮರರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ಜಗದ ರತ್ನ. ಅವರು ತಮ್ಮ ಜ್ಞಾನದ ಮೂಲಕ ಲವ-ಕುಶ ರ ಜೀವನವನ್ನು ಹೇಗೆ ಪಾರಂಗತ ಮಾಡಿದ್ದಾರೆ ಹಾಗೆಯೇ ನಮ್ಮ ಮಕ್ಕಳಿಗೂ ಶಿಕ್ಷಣವನ್ನು ನಾವು ನೀಡಬೇಕು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಒಬ್ಬ ಉತ್ತಮ ನಾಯಕನಾಗಿ ಮಾಡಬೇಕು ಎಂದು ಹೇಳಿದರು.
ಶಾಸಕ ಕೆ.ಹರೀಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸದಾಚಾರದಿಂದ ಬದುಕುವಂತಹ ಮನುಕುಲಕ್ಕೆ ರಾಮಾಯಣ ಎಂಬ ಮಹಾಗ್ರಂಥವನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿ ಅವರು. ಅವರ ಆದರ್ಶಗಳು ನಮಗೆ ಸ್ಪೂರ್ತಿ, ಅವರು ನಡೆದು ಬಂದ ಹಾದಿಯಲ್ಲಿ ನಾವು ಜೀವನವನ್ನು ನಡೆಸೋಣ ಎಂದು ಹೇಳಿದರು.
ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಹಿರಿಯ ಕಾನೂನು ಸಹಾಯಕ ಪ್ರಾಧ್ಯಾಪಕ ಡಾ.ಡಿ.ರಂಗಸ್ವಾಮಿ ಮಾತನಾಡಿದರು. ಎಸ್.ಎಸ್. ಎಲ್.ಸಿ ಯಲ್ಲಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಹೆಚ್ಚು ಹೆಸರು ಮಾಡಿದ ಪರಿಶಿಷ್ಟ ವರ್ಗದ ಶಾಲೆಗಳ ಪ್ರಾಧ್ಯಾಪಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಎಂ.ಕೆ.ಮಲ್ಲೇಶ್, ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿ. ಶಿವಕುಮಾರ್ ಇತರರು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟ ವಾಲ್ಮೀಕಿ ಪ್ರತಿಮೆಯನ್ನು ಒಳಗೊಂಡ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.
































