
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.02: ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಇಂದು ಪೊಲೀಸ್ ಧ್ವಜ ದಿನಾಚರಣೆ ನಡೆಯಿತು.
ಬಳ್ಳಾರಿ ಗ್ರಾಮೀಣ ಠಾಣೆಯ ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸುಲು ಎಂ. ಮುಖ್ಯ ಅತಿಥಿಗಳಾಗಿ ಆಗಮಿಸಿ. ಆರು ತುಕಡಿಗಳಿಂದ ಪಥ ಸಂಚಲನೆಯ ವಂದನೆ ಸ್ವೀಕರಿಸಿದರು.
ನಂತರ ಮಾತನಾಡಿದ ಶ್ರೀನಿವಾಸುಲು, ಕರ್ತವ್ಯದ ಸಮಯದಲ್ಲಿ ಅನೇಕ ಘೋರ ಘಟನೆಗಳನ್ನು ಎದುರಿಸುವ ಶಕ್ತಿಯನ್ನು ನನಗೆ ಪೊಲೀಸ್ ಇಲಾಖೆ ನೀಡಿತ್ತು ಎಂದ ಅವರು. ನಿವೃತ್ತರಾದ ಪೊಲೀಸರಿಗೆ, ಕುಟುಂಬ ವರ್ಗಕ್ಕೆ ದೊರೆಯಬೇಕಾದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಅಗತ್ಯ ದಾಖಲೆಗಳನ್ನು ಪಡೆದು ನೀಡುವಂತಾಗಲು ಪ್ರತ್ಯೇಕ ವಿಭಾಗ ತೆರೆಯಲು ಮನವಿ ಮಾಡಿದರು.
ಹೆಚ್ಚುವರಿ ಎಸ್ಪಿ ಎಸ್.ನವೀನ್ ಕುಮಾರ್ ಮಾತನಾಡಿ, ಈ ವರ್ಷ ಮುಖ್ಯ ಮಂತ್ರಿಗಳ ಪದಕಕ್ಕೆ ಬಳ್ಳಾರಿ ಜಿಲ್ಲೆಯ ಎಸ್ಪಿ ಡಾ. ಸುಮನ್ ಡಿ ಪೆನ್ನೇಕರ್, ಸಂಚಾರಿ ಠಾಣೆಯ ಪಿಎಸ್ ಐ ಕಾಳಿಂಗ, ಸಿರುಗುಪ್ಪ ಠಾಣೆಯ ಪಿಎಸ್ ಐ ಪರುಶುರಾಂ ಅವರು ಭಾಜನರಾಗಿದ್ದಾರೆ.ಪೊಲೀಸ್ ಧ್ಜಜ ಮಾರಾಟದಿಂದ ಬರುವ ಹಣದಿಂದ ನಿವೃತ್ತ ಪೊಲೀಸ್ ಸಿಬ್ಬಂದಿಗೆ ಈ ವರ್ಷ. ಚಿಕಿತ್ಸೆಗಾಗಿ 13.61 ಲಕ್ಷ ರೂ ನೀಡಿದೆ. ಇನ್ನಿತರ ಸೌಲಭ್ಯಗಳನ್ನು ಸಹ ನೀಡಿದೆ. ಈ ವರ್ಷ 27 ಜನಸಿಬ್ಬಂದಿ ನಿವೃತ್ತರಾಗಿದ್ದಾರೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿಎಆರ್ ಡಿವೈಎಸ್ಪಿ ತಿಪ್ಪೆಸ್ವಾಮಿ, ನಿವೃತ್ತ ಸೈನಿಕರಿಗೆ ದೊರೆಯುವ ಸೌಲಭ್ಯಗಳು ಪೊಲೀಸರಿಗೂ ದೊರೆಯುವಂತೆ ಆಗಬೇಕು ಎಂದರು.
ನಗರ ಡಿವೈಎಸ್ಪಿ ಗೋವಿಂದರಾಜುಲು ಸ್ವಾಗತಿಸಿದರು. ಪಿಹಳ್ಳಿ ಠಾಣೆಯ ಸಿಪಿಐ ಸುಭಾಷ್ ಕಾರ್ಯಕ್ರಮ ನಿರೂಪಿಸಿದರು. ತೋರಣಗಲ್ಲು ಡಿವೈಎಸ್ಪಿ ಪ್ರಸಾದ್ ಗೋಖಲೆ ವಂದನಾರ್ಪಣೆ ಮಾಡಿದರು.
ಬಾಕ್ಸ್
ಅಸಮಾಧಾನ :
ಸಮಾರಂಭಕ್ಕೆ ಈ ವರ್ಷ ನಿವೃತ್ತರಾದ 27 ಜನರನ್ನು ಆಹ್ವಾನಿಸಲಾಗಿತ್ತು. ಅವರನ್ನು ವೇದಿಕೆಗೆ ಕರೆದು ಪುಷ್ಪ ಗುಚ್ಚ ನೀಡದೆ. ಕುಳಿತಲ್ಲಿಯೇ ನೀಡಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿ. ಇಷ್ಟಕ್ಕೆ ನಮ್ಮನ್ನು ಯಾಕೆ ಕರೆಯಬೇಕಿತ್ತು. ವೇದಿಕೆ ಮೇಲೆ ಕರೆದು ಗೌರವಿಸಬೇಕಿತ್ತು ಎಂದರು.


















