ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಸಂಸ್ಥೆಯ ೯ನೇ ತರಗತಿಯ ವಿದ್ಯಾರ್ಥಿನಿ ಶಮಿಕಾ ಎಂ.ಕೆ (೧೫) ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ೨೪ ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ಬಿಡಿಸುವ ಸಾಹಸ ನಡೆಸಲಿದ್ದಾರೆ.
ಪುತ್ತೂರು: ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆಯುವ ಉದ್ದೇಶದೊಂದಿಗೆ ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಸಂಸ್ಥೆಯ ೯ನೇ ತರಗತಿಯ ವಿದ್ಯಾರ್ಥಿನಿ ಶಮಿಕಾ ಎಂ.ಕೆ (೧೫) ವಿಶೇಷ ಸಾಧನೆ ಮಾಡಲು ಮುಂದಾಗಿದ್ದಾರೆ. ಅವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ೨೪ ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ಬಿಡಿಸುವ ಸಾಹಸ ನಡೆಸಲಿದ್ದಾರೆ. ಡಿ. ೬ ಮತ್ತು ೭ ರಂದು ಪುತ್ತೂರಿನ ವರ್ಣ ಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ಸ್ಯಾಂಡ್ ಆರ್ಟ್ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಪುತ್ತೂರಿನ ವರ್ಣ ಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಚಿತ್ರ ಕಲಾವಿದ ಪ್ರವೀಣ್ ವರ್ಣ ಕುಟೀರ ಅವರು ಬುಧವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ನಿವಾಸಿಗಳಾದ ಕೇಶವ- ಗೀತಾಮಣಿ ದಂಪತಿಗಳ ಏಕೈಕ ಪುತ್ರಿಯಾಗಿರುವ ಶಮಿಕಾ ವರ್ಣ ಕುಟೀರ ಕಲಾ ಶಿಕ್ಷಣ ಸಂಸ್ಥೆಯ ಕಲಾ ವಿದ್ಯಾರ್ಥಿಯಾಗಿದ್ದಾಳೆ. ಈಕೆ ೪ ವರ್ಷಗಳ ಹಿಂದೆ ಗಾಂಧಾರಿ ವಿದ್ಯೆ (ಕಣ್ಣು ಮುಚ್ಚಿಕೊಂಡು ಓದುವ) ಅಭ್ಯಾಸ ರೂಢಿಗತ ಮಾಡಿಕೊಂಡಿದ್ದಾಳೆ. ೪ ತಿಂಗಳಿಂದ ಈ ವಿದ್ಯೆಯ ಮೂಲಕವೇ ಸ್ಯಾಂಡ್ ಆರ್ಟ್ (ಮರಳು ಚಿತ್ರ) ಬಿಡಿಸುವುದನ್ನು ಕಲಿಯುತ್ತಿದ್ದಾಳೆ. ಇದೀಗ ದಿನದ ೨೪ ಗಂಟೆಯೂ ನಿರಂತರ ಕಣ್ಣು ಮುಚ್ಚಿಕೊಂಡು ಮರಳು ಚಿತ್ರ ಬಿಡಿಸುವುದನ್ನು ಕರಗತ ಮಾಡಿಕೊಂಡಿದ್ದು, ಇದನ್ನು ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಗೆ ಸೇರಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂದು ಮಧ್ಯಾಹ್ನ ೧೨ ಗಂಟೆಗೆ ಚಿತ್ರಬಿಡಿಸಲು ಆರಂಭಿಸುವ ಶಮಿಕಾ ಅವರು ಡಿ. ೭ರಂದು ಮಧ್ಯಾಹ್ನ ೧೨ ಗಂಟೆ ತನಕ ಮುಂದುವರಿಸಲಿದ್ದಾರೆ. ಈ ಅವಧಿಯಲ್ಲಿ ಪ್ರತೀ ೩ ಗಂಟೆಗೊಮ್ಮೆ ೧೫ ನಿಮಿಷಗಳ ಬಿಡುವು ಪಡೆಯುತ್ತಾರೆ. ಹಿನ್ನೆಲೆ ಗಾಯಕರು ಹಾಡುಗಳನ್ನು ಹಾಡುತ್ತಿದ್ದಂತೆ ಶಮಿಕಾ ಹಾಡಿನ ಭಾವಕ್ಕೆ ಸರಿಯಾದ ಚಿತ್ರವನ್ನು ಮರಳಿನ ಮೇಲೆ ಬಿಡಿಸುತ್ತಾಳೆ. ಒಂದು ಹಾಡು ಮುಗಿಯುವಾಗ ಒಂದು ಚಿತ್ರವೂ ಸಂಪೂರ್ಣಗೊಂಡಿರುತ್ತದೆ. ಹೀಗೆ ೨೪ ಗಂಟೆಯಲ್ಲಿ ಸುಮಾರು ೩೦೦ ಹಾಡುಗಳನ್ನು ಗಾಯಕರ ತಂಡ ಹಾಡಲಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಶಮಿಕಾ ಚಿತ್ರ ಬಿಡಿಸುತ್ತಾಳೆ. ಪ್ರತೀ ಚಿತ್ರ ಬರೆದ ಕೂಡಲೇ ಅದನ್ನು ಅಳಿಸಿ ಅದೇ ಮರಳಿನ ಮೇಲೆ ಮತ್ತೊಂದು ಚಿತ್ರ ಬಿಡಿಸುತ್ತಾಳೆ. ೨೪ ಗಂಟೆಗಳ ಪ್ರದರ್ಶವನ್ನು ಪೂರ್ತಿ ಚಿತ್ರೀಕರಣ ಮಾಡಿಕೊಳ್ಳಲಾಗುತ್ತದೆ. ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಡಾ.ಮನೀಷ್ ವೈಶ್ಣೋಯಿ ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶಮಿಕಾಳ ಸಾಧನೆಯನ್ನು ದಾಖಲು ಮಾಡಿಕೊಳ್ಳಲಿದ್ದಾರೆ.ಕೋವಿಡ್ ಸಂದರ್ಭದಲ್ಲಿ ಕಲಿಕೆ ಆರಂಭ: ಕೇಶವ ಪಿ.ಎಂ.ಶಮಿಕಾಳ ತಂದೆ ಕೇಶವ ಪಿ.ಎಂ ಅವರು ಮಾತನಾಡಿ ಕೋವಿಡ್ ಲಾಕ್ಡೌನ್ ಸಂದರ್ಭ ಮನೆಯಲ್ಲಿದ್ದಾಗ ಶಮಿಕಾ ಗಾಂಧಾರಿ ವಿದ್ಯೆ ಕಲಿಯಲು ಆರಂಭಿಸಿದ್ದು, ಮೂಡಿಗೆರೆಯ ಸತೀಶ್ ಪದ್ಮನಾಭ್ ಎಂಬ ಗುರುಗಳಿಂದ ಆನ್ಲೈನ್ ಮೂಲಕ ಕಲಿತುಕೊಂಡ ವಿದ್ಯೆಯನ್ನು ಸತತ ಅಭ್ಯಾಸದ ಮೂಲಕ ಅಭಿವೃದ್ಧಿ ಮಾಡಿಕೊಂಡಿದ್ದಾಳೆ. ಪ್ರಸ್ತುತ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಗೆ ಚಿತ್ರಕಲಾ ವಿದ್ಯಾರ್ಥಿನಿಯಾಗಿ ಸೇರಿದ ಮೇಲೆ ಗಾಂಧಾರಿ ವಿದ್ಯೆ ಬಳಸಿಕೊಂಡು ಮರಳು ಚಿತ್ರ ಬಿಡಿಸುವುದನ್ನೂ ಅಭ್ಯಾಸ ಮಾಡಿದ್ದಾಳೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಗೀತಾ ಲಕ್ಷ್ಮೀ ಕೆದಿಮಾರು, ಸದಸ್ಯ ಬಾಲಸುಬ್ರಹ್ಮಣ್ಯ ಶರ್ಮ, ಶಮಿಕಾ ಮತ್ತು ತಂದೆ ಕೇಶವ ಪಿ.ಎಂ. ಉಪಸ್ಥಿತರಿದ್ದರು.

























