ಪಂಜಾಬ್ ಪ್ರವಾಹ: ಪರಿಹಾರ ಕಾರ್‍ಯ ಬಿರುಸು

ಚಂಡೀಗಢ, ಸೆ. ೫: ಪಂಜಾಬ್ ನಲ್ಲಿ ಪ್ರವಾಹದ ಬಳಿಕ ಪರಿಹಾರ ಕಾರ್ಯಚರಣೆ ಚುರುಕುಗೊಂಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ವಿಕ್ರಮ್ ಜಿತ್ ಸಿಂಗ್ ಸಾಹ್ನಿ ಅವರು ಪಂಜಾಬ್ ನ ಪ್ರವಾಹ ಪರಿಹಾರ ಕಾರ್ಯಾಚರಣೆಗಳಿಗೆ ೫ ಕೋಟಿ ರೂ.ನೀಡುವುದಾಗಿ ವಾಗ್ದಾನ ಮಾಡಿದ್ದಾರೆ.
ಈ ನಿಧಿಯ ಒಂದು ಭಾಗವು ಸುಧಾರಿತ ರಕ್ಷಣಾ ದೋಣಿಗಳು, ಆಧುನಿಕ ಹೂಳೆತ್ತುವ ಯಂತ್ರೋಪಕರಣಗಳು ಮತ್ತು ಭವಿಷ್ಯದ ವಿಪತ್ತುಗಳಿಂದ ದುರ್ಬಲ ಪ್ರದೇಶಗಳನ್ನು ರಕ್ಷಿಸಲು ಒಡ್ಡುಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ಸಾಹ್ನಿ ಹೇಳಿದ್ದಾರೆ.
ಸನ್ ಫೌಂಡೇಶನ್ ಎಂಬ ಎನ್ ಜಿಒ ಮೂಲಕ ಸಾಹ್ನಿ ಈಗಾಗಲೇ ಮೋಟಾರು ದೋಣಿಗಳು, ಆಂಬ್ಯುಲೆನ್ಸ್ ಗಳು, ಒಣ ಪಡಿತರ ಕಿಟ್ ಗಳು, ವೈದ್ಯಕೀಯ ಸರಬರಾಜುಗಳು, ನೈರ್ಮಲ್ಯ ವಸ್ತುಗಳು ಮತ್ತು ಜಾನುವಾರುಗಳ ಮೇವಿಗಾಗಿ ೧ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ.
ಮುಂದಿನ ಬಿತ್ತನೆ ಋತುವಿಗಾಗಿ ಸಣ್ಣ ರೈತರಿಗೆ ರಸಗೊಬ್ಬರಗಳು, ಬೀಜಗಳು ಮತ್ತು ಕೀಟನಾಶಕಗಳನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದರು.
ಇದೇ ವೇಳೆ ಕೇಂದ್ರ ಸರ್ಕಾರದ ನೆರವನ್ನು ಒತ್ತಾಯಿಸಿದ ಸಾಹ್ನಿ, ಬೆಳೆ ನಷ್ಟವನ್ನು ಎದುರಿಸುತ್ತಿರುವ ರೈತರಿಗೆ ಎಕರೆಗೆ ೫೦,೦೦೦ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ ಕೂಲಿ ಕಾರ್ಮಿಕರು ಮತ್ತು ಜಾನುವಾರು ಮಾಲೀಕರಿಗೆ ವಿತ್ತೀಯ ಸಹಾಯವನ್ನು ಪ್ರಸ್ತಾಪಿಸಿ ೧೦,೦೦೦ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಅನ್ನು ಒತ್ತಾಯಿಸಿದ್ದಾರೆ.

ಹೆಚ್ಚಿದ ನೀರಿನ ಮಟ್ಟ, ಭಾಕ್ರಾ ಮತ್ತು ಪಾಂಗ್ ಅಣೆಕಟ್ಟೆಗಳಲ್ಲಿ ಎಚ್ಚರಿಕೆ
ಭಾಕ್ರಾ ಅಣೆಕಟ್ಟಿನ ನೀರಿನ ಮಟ್ಟವು ೧,೬೭೯ ಅಡಿಗಳನ್ನು ತಲುಪಿದ್ದರಿಂದ ಪಂಜಾಬ್ ನ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಇದು ಅದರ ಗರಿಷ್ಠ ಸಾಮರ್ಥ್ಯಕ್ಕಿಂತ ಕೇವಲ ಒಂದು ಅಡಿ ಕಡಿಮೆಯಾಗಿದೆ. ನೀರಿನ ಒಳಹರಿವು ಹೆಚ್ಚುತ್ತಿರುವುದರಿಂದ ರೂಪ್ ನಗರ್ ಆಡಳಿತವು ಸಟ್ಲೆಜ್ ನದಿಯ ಬಳಿಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದು, ಸುರಕ್ಷಿತ ಪ್ರದೇಶಗಳು ಮತ್ತು ಪರಿಹಾರ ಶಿಬಿರಗಳಿಗೆ ತಕ್ಷಣ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.

ಪಾಂಗ್ ಅಣೆಕಟ್ಟು ಸಹ ಸಾಮರ್ಥ್ಯವನ್ನು ಮೀರಿ ಹರಿಯುತ್ತಿದೆ. ಒಳಹರಿವು ೧.೩೨ ಲಕ್ಷ ಕ್ಯೂಸೆಕ್ ತಲುಪಿದೆ. ಹೀಗಾಗಿ ಅಪಾರ ಪ್ರಮಾಣದ ನೀರನ್ನು ಹೊರ ಬಿಡಬೇಕಾಗಿದೆ. ಭಾಕ್ರಾದಿಂದ ನೀರಿನ ಹೊರಹರಿವು ೮೦,೦೦೦-೮೫,೦೦೦ ಕ್ಯೂಸೆಕ್ ಗೆ ಏರಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸಾವಿನ ಸಂಖ್ಯೆ ೪೦ಕ್ಕೆ ಏರಿಕೆ
ಪಂಜಾಬ್ ನ ಪ್ರವಾಹ ದುರಂತದಲ್ಲಿ ಈಗಾಗಲೇ ೧೪ ಜಿಲ್ಲೆಗಳಲ್ಲಿ ೪೩ ಜನರು ಮೃತಪಟ್ಟಿದ್ದಾರೆ ಮತ್ತು ಪಠಾಣ್ ಕೋಟ್ ನಲ್ಲಿ ಮೂವರು ಕಾಣೆಯಾಗಿದ್ದಾರೆ. ೧.೭೧ ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರಾಜ್ಯದ ಕೃಷಿ ಆರ್ಥಿಕತೆಯನ್ನು ಹಿನ್ನಡೆಯುಂಟು ಮಾಡಿದೆ. ಪ್ರವಾಹದಿಂದಾಗಿ ೨೩ ಜಿಲ್ಲೆಗಳ ೧,೯೦೨ ಗ್ರಾಮಗಳು ಜಲಾವೃತವಾಗಿದ್ದು, ೩.೮೪ ಲಕ್ಷಕ್ಕೂ ಹೆಚ್ಚು ನಿವಾಸಿಗಳ ಮೇಲೆ ಪರಿಣಾಮ ಬೀರಿದೆ. ವಿಪತ್ತು ಪ್ರತಿಕ್ರಿಯೆ ಪಡೆಗಳು ಮತ್ತು ಸ್ಥಳೀಯ ಆಡಳಿತವು ಸುಮಾರು ೨೧,೦೦೦ ಜನರನ್ನು ಸ್ಥಳಾಂತರಿಸಿದೆ.
ರಾಜ್ಯ ಮತ್ತು ಕೇಂದ್ರದಿಂದ ಪರಿಹಾರ ಕಾರ್ಯ ಹೆಚ್ಚಳ
ಪೀಡಿತ ನಿವಾಸಿಗಳೊಂದಿಗೆ ನೇರ ಸಂವಹನ ಮತ್ತು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ಮರೂನ್ ಗ್ರಾಮದಲ್ಲಿ ಗೆಜೆಟೆಡ್ ಅಧಿಕಾರಿಗಳನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ನಿರ್ದೇಶನ ನೀಡಿದ್ದಾರೆ. ಬೆಳೆ ಮತ್ತು ಆಸ್ತಿ ನಷ್ಟವನ್ನು ನಿರ್ಣಯಿಸಲು ವಿಶೇಷ ’ಗಿರ್ದಾವರಿ’ ಸಮೀಕ್ಷೆಗೆ ಆದೇಶಿಸಲಾಗಿದೆ.
ಪ್ರವಾಹ ಪೀಡಿತ ಜಿಲ್ಲೆಗಳಾದ ಅಮೃತಸರ, ಗುರುದಾಸ್ ಪುರ ಮತ್ತು ಕಪುರ್ಥಾಲಾಗಳಿಗೆ ಭೇಟಿ ನೀಡಿದ ನಂತರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪರಿಸ್ಥಿತಿಯನ್ನು ” ಜಲಪ್ರಳಯ” ಎಂದು ಬಣ್ಣಿಸಿದ್ದಾರೆ. ರೈತರಿಗೆ ಸಂಪೂರ್ಣ ಕೇಂದ್ರ ಬೆಂಬಲದ ಭರವಸೆ ನೀಡಿದ ಅವರು, ಪರಿಹಾರ ವಿತರಣೆಗಾಗಿ ಎರಡು ಕೇಂದ್ರ ತಂಡಗಳು ಹಾನಿಯನ್ನು ನಿರ್ಣಯಿಸುತ್ತಿವೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕಪುರ್ತಾಲಾದ ತೀವ್ರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತುರ್ತು ಕೇಂದ್ರ ಪರಿಹಾರ ಪ್ಯಾಕೇಜ್ ಗಾಗಿ ಮನವಿ ಮಾಡಿದರು.
ಪಂಜಾಬ್ ನ ಭೀಕರ ಪ್ರವಾಹಗಳಲ್ಲಿ ಒಂದು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ನ ಸ್ವಂತ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯೊಂದಿಗೆ ಉಬ್ಬಿದ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳಿಂದ ಉಂಟಾದ ಈ ದುರಂತವನ್ನು ದಶಕಗಳಲ್ಲಿ ಪಂಜಾಬ್ ನ ಅತ್ಯಂತ ತೀವ್ರ ಪ್ರವಾಹ ಬಿಕ್ಕಟ್ಟುಗಳಲ್ಲಿ ಒಂದಾಗಿದೆ ಎಂದು ವಿವರಿಸಲಾಗಿದೆ.

ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಮತ್ತು ಸ್ಥಳೀಯ ಸ್ವಯಂಸೇವಕರ ತಂಡಗಳು ವ್ಯಾಪಕ ಸ್ಥಳಾಂತರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಆದರೆ ಹೆಚ್ಚಿನ ಮಳೆಯೊಂದಿಗೆ ಬಿಕ್ಕಟ್ಟು ತೀವ್ರಗೊಳ್ಳಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.