
ಸಂಜೆವಾಣಿ ನ್ಯೂಸ್
ಮೈಸೂರು: ನ.03:- ದಿನನಿತ್ಯ ನಾಯಕತ್ವ ಬದಲಾವಣೆ ಕುರಿತು ಚರ್ಚಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಆಡಳಿತ ಯಂತ್ರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಶಾಸಕ ಜಿ.ಟಿ.ದೇವೇಗೌಡರು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಸಚಿವರು, ಶಾಸಕರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ತನಕ ಅವರನ್ನು ಬೆಂಬಲಿಸಬೇಕು. ಇಲ್ಲದಿದ್ದರೆ ಅಧಿಕಾರಿ ವರ್ಗ ಹಾಗೂ ಆಡಳಿತ ಯಂತ್ರ ಕುಸಿಯುತ್ತದೆ. ಇದು ರಾಜ್ಯದ ಅಭಿವೃದ್ಧಿ ಮೇಲೆಯೂ ಪರಿಣಾಮ ಬೀರುತ್ತದೆ ಎಂದರು.
ಡಿ.ಕೆ.ಶಿವಕುಮಾರ್ ಸಿಎಂ ಆಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡರು, ಶಿವಕುಮಾರ್ ಅವರ ತಮ್ಮ ಸುರೇಶ್ ಅವರೇ ಹೇಳಿದ್ದಾರೆ. ದೇವರ ದಯೆ, ಕಾಲ ಕೂಡಿ ಬಂದರೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದರು.
ನಾನು ಸಿದ್ದರಾಮಯ್ಯ ಇಬ್ಬರು 25 ವರ್ಷದಿಂದ ಸ್ನೇಹಿತರು. ನಾನು ಅವರನ್ನು ನೆನಪಿಸಿಕೊಳ್ಳಬೇಕು. ಅವರು ನನ್ನನ್ನು ನೆನಪಿಸಿಕೊಳ್ಳಬೇಕು. ನಾನು ಜೆಡಿಎಸ್ ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಒಂದು ಪಕ್ಷದಿಂದ ಗೆದ್ದು ಇನ್ನೊಂದು ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ. ಈ ಹಿಂದೆ ರಾಹುಲ್ ಗಾಂಧಿ ಅವರೊಬ್ಬರನ್ನು ಬಿಟ್ಟು ಮಿಕ್ಕೆಲ್ಲ ಕೇಂದ್ರ ಹಾಗೂ ರಾಜ್ಯದ ಅತಿರಥ ಮಹಾರಥರು ಕಾಂಗ್ರೆಸ್ಗೆ ಬನ್ನಿ, ಸಚಿವರಾಗಿ ಎಂದು ಕರೆಯುತ್ತಿದ್ದರು. ನಿಮ್ಮ ಮಗನನ್ನು ಸಂಸದನ್ನಾಗಿ ಮಾಡಿ ಅಂದರು. ಆದರೆ ದೇವೇಗೌಡರು ಮನೆಗೆ ಬಂದರು. ನಾನು ಪಕ್ಷದಲ್ಲೇ ಉಳಿದುಕೊಂಡೆ ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.
ಸಮವಾದ ಹುದ್ದೆ: ಚಾಮುಂಡಿ ಬೆಟ್ಟದಲ್ಲಿ ಸಿದ್ದರಾಮಯ್ಯ ಪರ ಹೇಳಿಕೆ ಕೊಟ್ಟೆ ಎಂದು ಕಾಂಗ್ರೆಸ್ಗೆ ಹೋಗುತ್ತಾರೆ ಅಂತಾರೆ. ನನಗೆ ಆ ಜಾತಿಗೆಟ್ಟ ಬುದ್ಧಿ ಇಲ್ಲ. ನಾನು ಪಕ್ಷ ನಿಷ್ಠೆ ಇರುವ ವ್ಯಕ್ತಿ. ದೇವೇಗೌಡರು, ಕುಮಾರಸ್ವಾಮಿ ಈ ಹಿಂದೆ ಸಿಎಂಗೆ ಸರಿ ಸಮವಾದ ಹುದ್ದೆ ಕೊಡುತ್ತೇವೆ ಅಂದರು. ಸ್ಥಾನ ಕೊಡಲಿಲ್ಲ ಅಂತ ನನಗೇನೂ ನೋವಿಲ್ಲ. ನನ್ನ ಅಂತರಾತ್ಮವನ್ನು ಯಾರು ಅರಿತಿಲ್ಲ. ನನ್ನ ಕುಟುಂಬದವರೇ ನನ್ನ ಅರ್ಥ ಮಾಡಿಕೊಂಡಿಲ್ಲ. ಇನ್ನು ಬೇರೆ ಅವರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ. ನಾನು ಕರ್ಣನ ರೀತಿ. ನನ್ನ ಕೆಲಸ ಚರಿತ್ರೆಯಲ್ಲಿ ಉಳಿಯುತ್ತದೆ ಎಂದರು.

































