Home ಜಿಲ್ಲೆ ಮೈಸೂರು ತಂಬಾಕು ಖರೀದಿ ಸಮಸ್ಯೆ ಇತ್ಯರ್ಥಕ್ಕೆ ಗಡುವು

ತಂಬಾಕು ಖರೀದಿ ಸಮಸ್ಯೆ ಇತ್ಯರ್ಥಕ್ಕೆ ಗಡುವು

ಸಂಜೆವಾಣಿ ನ್ಯೂಸ್
ಮೈಸೂರು: ಫೆ.24:-
ತಂಬಾಕು ಖರೀದಿ ಸಮಸ್ಯೆ ಇತ್ಯರ್ಥಪಡಿಸಿ, ಹಿಂದಿನ ದರದಂತೆ ಖರೀದಿ ಮಾಡಬೇಕು ಅಥವಾ ಗೋದಾಮು ಸೀಜ್ ಮಾಡಬೇಕೋ ಎಂಬುದನ್ನು ಐಟಿಸಿ ಕಂಪನಿಯವರು ಮಂಗಳವಾರ ಮಧ್ಯಾಹ್ನದೊಳಗೆ ತಿಳಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸೂಚಿಸಿದರು.


ಜಿಲ್ಲಾ ಪಂಚಾಯಿತಿ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ತಂಬಾಕು ಬೆಳೆಗಾರರು ಹಾಗೂ ಖರೀದಿದಾರರ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಸಭೆಯಲ್ಲಿ ರೈತರು ತಂಬಾಕು ಬೆಳೆಯನ್ನು ನಿಷೇಧಿಸಿದರೆ ಬೆಳೆಯುವುದನ್ನು ನಿಲ್ಲಿಸುವುದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನಿಗದಿಪಡಿಸಿದ್ದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ತಂಬಾಕು ಬೆಳೆದಿದ್ದೇವೆ.ಬೆಳೆ ಕಡಿಮೆಯಾದ ಮೇಲೆ ಹೆಚ್ಚು ಬೆಲೆ ಸಿಗಬೇಕಿತ್ತು. ಇದೀಗ ಬೆಳೆ ಕಡಿಮೆಯಾಗಿದ್ದರೂ ಬೆಲೆ ಕುಸಿತವಾಗಿದೆ. ನೆರೆಯ ಆಂಧ್ರಪ್ರದೇಶ ರೈತರು ಬೆಳೆದಿರುವ ತಂಬಾಕಿಗೆ ಹೆಚ್ಚಿನ ಬೆಲೆ ಸಿಗುತ್ತಿದೆ. ಕರ್ನಾಟಕದ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ರೈತರು ಅಳಲು ತೊಡಿಕೊಂಡರು. ಬೆಲೆ ನಿಗದಿ ಅಧಿಕಾರ ನನಗಿಲ್ಲ. ಆಂಧ್ರಪ್ರದೇಶದ ಗುಂಟೂರಿಗೆ ಬಂದು ಚರ್ಚಿಸುವಂತೆ ಹೇಳಿದ ಐಟಿಸಿ ಸಿಗರೇಟ್ ಕಂಪನಿಯ ಪ್ರತಿನಿಧಿಯ ವಿರುದ್ಧ ಜನಪ್ರತಿನಿಧಿಗಳು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಐಟಿಸಿ ಕಂಪನಿಯ ಪ್ರತಿನಿಧಿ ವಿರುದ್ಧ ಗರಂ ಆದರು. ಸಮರ್ಪಕ ಮಾಹಿತಿ ಇಲ್ಲದೇ ಸಭೆಗೆ ಬಂದಿದ್ದೀರಿ ಎಂದು ಹರಿಹಾಯ್ದರು. ರೈತರ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಡಿಸಿ ಭರವಸೆ ಕೊಟ್ಟ ದರಕ್ಕೆ ತಂಬಾಕು ಖರೀದಿ ಮಾಡಬೇಕು ಎಂದು ತಾಕೀತು ಮಾಡಿದರು.
ಉಡಾಫೆಯ ಉತ್ತರ ಕೊಡಬಾರದು ಎಂದು ಶಾಸಕ ಡಿ.ರವಿಶಂಕರ್ ದನಿಗೂಡಿಸಿದರು. ಹಳೆಯದಲ್ಲೆ ಚರ್ಚೆ ಮಾಡುವುದು ಬೇಡ. ತಂಬಾಕು ಬೆಳೆಗಾರರಿಂದ ಕಂಪನಿ ಇರುವುದು. ಕಂಪನಿಯಿಂದ ರೈತರಲ್ಲ ಎಂದು ಗುಡುಗಿದರು. ಈ ವೇಳೆ ರೈತರು ಜೋರು ದನಿಯಲ್ಲಿ ಮಾತಾಡಿದರು. ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ತಂಬಾಕು ಮಂಡಳಿ ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸುತ್ತಿಲ್ಲ. ಐಟಿಸಿ ಕಂಪನಿ ಪರ ಕೆಲಸ ಮಾಡುತ್ತಿದ್ದು, ಏಕಸ್ವಾಮ್ಯತೆ ಹೊಂದಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದರು.


ಸಚಿವ ಕೆ.ವೆಂಕಟೇಶ್ ಮಾತನಾಡಿ, ಐಟಿಸಿ 100 ಮಿಲಿ ತಂಬಾಕು ಬೆಳೆಯಲು ಹೇಳಿತ್ತು. ಮಾರುಕಟ್ಟೆ ಪ್ರಾರಂಭವಾದಗ ಉತ್ತಮ ಬೆಲೆ ನೀಡಲಾಗಿತ್ತು. ಸಿಗರೇಟ್‍ಗೆ ಜಿಎಸ್‍ಟಿ ಏರಿಕೆ ಮಾಡಿದ ಬಳಿಕ ಖರೀದಿ ಮಾಡಲಿಲ್ಲ. ಒಂದು ವಾರ ಮಾರುಕಟ್ಟೆಯನ್ನು ಬಂದ್ ಮಾಡಿದ್ದಾರೆ. ಮಾರುಕಟ್ಟೆ ಬಂದ್ ಮಾಡಿದ್ದು ಇದೇ ಮೊದಲು. ಈಗ ದರ ಕಡಿಮೆ ಮಾಡಿದ್ದಾರೆ. ರೈತರು ನಷ್ಟವಾಗುತ್ತದೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಟಿಸಿಯವರು ಹಿಂದಿನ ದರಕ್ಕೆ ತಂಬಾಕು ಖರೀದಿ ಮಾಡಬೇಕು ಎಂದು ಸೂಚಿಸಿದರು.


ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಡಿ.ಹರೀಶ್ ಗೌಡ, ಜಿಪಂ ಸಿಇಒ ಎಸ್ ಯುಕೇಶ್ ಕುಮಾರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಎನ್. ಭಾಸ್ಕರ್, ವಕೀಲ ಕಾಂತರಾಜ್, ಕೆ.ಮಹೇಶ್ ಮುಂತಾದವರಿದ್ದರು.