
ಸುಳ್ಯ:ಸುಳ್ಯದ ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ ಜ.೧೭ ಮತ್ತು ೧೮ ರಂದು ಪಂಜದಲ್ಲಿ ರಾಜ್ಯ ಮಟ್ಟದ ಯುವ ಪರ್ವ ಉತ್ಸವ ನಡೆಯಲಿದ್ದು ಈ ಸಲುವಾಗಿ ಪಂಜ ಪಂಚಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಯಶಸ್ವಿಯಾಗುತ್ತದೆ. ನಾನು ಮಂಡಳಿ ಅಧ್ಯಕ್ಷೆಯಾಗಿದ್ದ ಸಂದರ್ಭ ರಾಜ್ಯ ಯುವಜನ ಮೇಳ ಸುಳ್ಯದಲ್ಲಿ ಆಯಿತು. ಈಗ ಪಂಜದಲ್ಲಿ ರಾಜ್ಯ ಯುವ ಪರ್ವ ಉತ್ಸವ ಮಾಡುವಾಗ ನಾವೆಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸೋಣ” ಎಂದರು.
ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಮಾತನಾಡಿ “ಯುವಕರು ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡುವಾಗ ನಾವೆಲ್ಲರೂ ಕೂಡಾ ಅವರಿಗೆ ಸಹಕಾರ ನೀಡೋಣ. ಇದರಿಂದ ಯುವ ಸಮೂಹ ಇನ್ನಷ್ಟು ಕ್ರಿಯಾಶೀಲರಾಗಿ ಸಮಾಜಕ್ಕೆ ಒಂದಷ್ಟು ಕೆಲಸ ಮಾಡಲು ನಾವು ಸಹಕಾರಿಗಳಾಗೋಣ” ಎಂದರು.
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಿ, ಜ. ೧೭ ಮತ್ತು ೧೮ರಂದು ಎರಡು ದಿನಗಳ ಕಾಲ ಪಂಜ ದೇವಸ್ಥಾನದ ವಠಾರದಲ್ಲಿ ಯುವ ಪರ್ವ ಹಮ್ಮಿಕೊಂಡಿರುವ ಕುರಿತು ವಿವರ ನೀಡಿದರು.
ಸಭೆಯಲ್ಲಿ ಕಾರ್ಯಕ್ರಮ ಯಶಸ್ಸಿಗೆ ಸಮಿತಿಯನ್ನು ರಚಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಗೌರವಾಧ್ಯಕ್ಷರಾಗಿ, ದಿಲೀಪ್ ಬಾಬ್ಲುಬೆಟ್ಟು ಅಧ್ಯಕ್ಷರಾಗಿ, ವಿಜೇಶ್ ಹಿರಿಯಡ್ಕ ಕಾರ್ಯದರ್ಶಿಯಾಗಿ, ಲೋಹಿತ್ ಬಾಳಿಕಳ ಕೋಶಾಧಿಕಾರಿ ಇರುವ ಸಮಿತಿಯನ್ನು ಮಾಡಲಾಯಿತಲ್ಲದೆ, ಉಪಸಮಿತಿಗಳಿಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಭೆಯಲ್ಲಿ ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಯುವ ಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ತಾಲೂಕು ಮಹಿಳಾ ಮಂಡಲಗಳ ಅಧ್ಯಕ್ಷೆ ಪುಷ್ಪಾ ಡಿ ಪ್ರಸಾದ್ ಕಾನತ್ತೂರ್, ಯುವ ಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ವಿಜಯ ಕುಮಾರ್, ಕಾರ್ಯದರ್ಶಿ ಮುರಳಿ ನಳಿಯಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪವನ್ ಪಲ್ಲತ್ತಡ್ಕ ಸ್ವಾಗತಿಸಿ, ಕಾರ್ಯದರ್ಶಿ ಮುರಳಿ ನಳಿಯಾರು ಕಾರ್ಯಕ್ರಮ ನಿರೂಪಿಸಿದರು.




























