ಜಾತಿ ಸಮೀಕ್ಷೆಯಲ್ಲಿ ಮೊಗೇರ ಎಂದೇ ದಾಖಲಿಸಲು ನಿರ್ಧಾರ

ಸುಳ್ಯದಲ್ಲಿ ರಾಜ್ಯ ಮೊಗೇರ ಸಂಘದ ಕಾರ್ಯಕಾರಿ ಸಮಿತಿ ಸಭೆ
ಸುಳ್ಯ:ಕರ್ನಾಟಕ ರಾಜ್ಯ ಮೊಗೇರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಸುಳ್ಯ ತಾಲೂಕು ಸಮಿತಿ ನೇತೃತ್ವದಲ್ಲಿ ಭಾನುವಾರ ಸುಳ್ಯ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ನಡೆಯಿತು.
ಮೊಗೇರ ಸಂಘದ ರಾಜ್ಯ ಅಧ್ಯಕ್ಷ ನಂದರಾಜ್ ಸಂಕೇಶ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಒಳಮೀಸಲಾತಿ, ನಕಲಿ ಜಾತಿ ಸರ್ಟಿಫಿಕೇಟ್ ವಿಚಾರದ ಕುರಿತು ಸುದೀರ್ಘ ಚರ್ಚೆ ನಡೆಯಿತು. ಒಳ ಮೀಸಲಾತಿಯಲ್ಲಿ ಶೇ. ೧ ರಿಂದ ಶೇ. ೬ ಕ್ಕೆ ಮೊಗೇರ ಸಮುದಾಯವನ್ನು ಸೇರ್ಪಡೆ ಮಾಡಲಾದ ಬಗ್ಗೆ ಚರ್ಚಿಸಲಾಯಿತು.
ರಾಜ್ಯಾಧ್ಯಕ್ಷ ನಂದರಾಜ್ ಸಂಕೇಶ ಮಾತನಾಡಿ ಉತ್ತರ ಕನ್ನಡ, ಕಾರವಾರ ಮತ್ತಿತರ ಜಿಲ್ಲೆಯಲ್ಲಿರುವ ಮೊಗವೀರ ಸಮುದಾಯದವರು ಮೊಗೇರ ಜನಾಂಗದ ನಕಲಿ ಜಾತಿ ಸರ್ಟಿಫಿಕೇಟ್ ಬಳಸಿ ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಮೊಗೇರ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ನಕಲಿ ಜಾತಿ ಸರ್ಟಿಫಿಕೇಟ್ ಕುರಿತು ಕಾನೂನು ಹೋರಾಟಕ್ಕೆ ಸಮುದಾಯದ ಎಲ್ಲರೂ ಸಹಕರಿಸುವಂತೆ ಕೇಳಿಕೊಂಡರು.
ರಾಜ್ಯ ಸರ್ಕಾರದ ವತಿಯಿಂದ ನಡೆಯಲಿರುವ ಜಾತಿ ಸಮೀಕ್ಷೆ ಯಲ್ಲಿ ಸಮುದಾಯದ ಎಲ್ಲರೂ ಮೊಗೇರ ಎಂದು ದಾಖಲಿಸಲು ಸಭೆಯಲ್ಲಿ ನಿರ್ಧಾರಿಸಲಾಯಿತು. ಮೊಬೈಲ್ ಆಪ್ ಮೂಲಕ ಮೊಗೇರ ಜನಾಂಗದ ಸಮೀಕ್ಷೆ ನಡೆಸುವ ಕುರಿತು ಮಾಹಿತಿ ನೀಡಲಾಯಿತು.
ಸಭೆಯಲ್ಲಿ ರಾಜ್ಯ ಸಂಘದ ಮುಖಂಡರಾದ ಸುಂದರ ಮೇರ ಮಂಗಳೂರು, ಉಪಾಧ್ಯಕ್ಷ ಪಿ. ಕೆ. ಚಂದ್ರು, ಜಿಲ್ಲಾಧ್ಯಕ್ಷ ತುಳಶೀದಾಸ್, ರಾಮ ಕೊಳಂಬೆ, ಸೀತಾರಾಮ್ ಮಂಗಳೂರು, ಶರತ್ ಕೆ. ಸಿ, ಜೀವನ್ ಪ್ರಕಾಶ್, ಕೊರಗಪ್ಪ ಪುತ್ತೂರು, ಮುಖೇಶ್ ಪುತ್ತೂರು, ಎಸ್. ಗಿರಿಯಪ್ಪ, ಸದಾನಂದ ಉಳ್ಳಾಲ, ಹರಿದಾಸ್ ಕೂಳೂರು, ರಾಘವ ಕೆ, ಸುಂದರ ಕೆ ಪುತ್ತೂರು, ವಸಂತ ಸೋಮವಾರಪೇಟೆ, ಶೇಖರ ಮಾಡವು, ರೋಹಿಣಿ ಬಿ, ಸುನೀತಾ ಅಂಡಾರ್, ಮಾಯಿಲಪ್ಪ ಮಾಸ್ತರ್, ಸುಂದರ ಬೆಲ್ಮಣ್ಣು, ಶಶಿಧರ ಬೊಟ್ಟಡ್ಕ, ಅಶೋಕ ಕೊಂಚಾಡಿ, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ, ಪ್ರಧಾನ ಕಾರ್ಯದರ್ಶಿ ಬಾಳಪ್ಪ ಕಳಂಜ, ಗೌರವಾಧ್ಯಕ್ಷ ಕೇಶವ ಮಾಸ್ತರ್ ಹೊಸಗದ್ದೆ, ದಕ್ಷಿಣ ಕನ್ನಡ, ಕೊಡಗು, ಹಾಸನ, ಉಡುಪಿ ಜಿಲ್ಲಾ ಸಮಿತಿ ಪದಾಧಿಕಾರಿಗಳು, ಎಲ್ಲಾ ಜಿಲ್ಲೆಯ, ತಾಲೂಕಿನ ಮೊಗೇರ ಸಮಿತಿಯ ಮುಖಂಡರು ಉಪಸ್ಥಿತರಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಚಿತ್ತಾರಂಜನ್ ದಾಸ್ ಸಭಾ ನಡಾವಳಿ ನಡೆಸಿಕೊಟ್ಟರು.