
ಸಂಜೆವಾಣಿ ನ್ಯೂಸ್
ಮೈಸೂರು: ನ.01:- ಸಮಾಜದಿಂದ ನೀವು ಏನನ್ನು ಬಯಸುತ್ತೀರೋ ಸಮಾಜ ಹಾಗೂ ಶ್ರೀಸಾಮಾನ್ಯರೂ ಕೂಡಾ ನಿಮ್ಮಿಂದ ಅದನ್ನೇ ಬಯಸುತ್ತಾರೆ. ಆಗಾಗಿ ನಾಗರಿಕರೊಂದಿಗೆ ಗೌರವಯುತವಾಗಿ ನಡೆದುಕೊಂಡು, ಅವರಿಂದ ಗೌರವವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ನಗರದ ಜ್ಯೋತಿ ನಗರದ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಪೆÇಲೀಸ್ ತರಬೇತಿ ಶಾಲೆಯ 9ನೇ ತಂಡದ ಮಹಿಳಾ ಪೆÇಲೀಸ್ ಕಾನ್ಸ್ಟೆಬಲ್ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ತರಬೇತಿ ಪಡೆದುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿರುವ ಪ್ರಶಿಕ್ಷಣಾರ್ಥಿಗಳು ಮುಖ್ಯವಾಗಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಾಗರಿಕ ಸಮಾಜದಲ್ಲಿ ಮಾನವಿಯತೆಯಿಂದ ವರ್ತಿಸುವುದನ್ನು ಪೆÇಲೀಸರು ರೂಢಿಸಿಕೊಳ್ಳಬೇಕು. ಮೊನ್ನೆ ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರ ಮಗಳ ಸಾವಿನ ವರದಿಯನ್ನು ಧೃಡಿಕರಿಸಿ ಪ್ರಮಾಣ ಪತ್ರ ನೀಡಲು ಸಂಬಂಧಪಟ್ಟವರೆಲ್ಲ ಹಣವನ್ನು ಪಡೆದುಕೊಂಡಿದ್ದಾರೆ ಎನ್ನುವುದು ವರದಿಯಾಗಿತ್ತು. ಇಲ್ಲಿ ಗಮನಿಸಬೇಕಾಗಿರುವುದು ಸಂಬಂಧಪಟ್ಟವರು ಒಂದು ಸಾವಿನ ಪ್ರಕರಣದಲ್ಲಿ ಹೇಗೆ ಅಮಾನವೀಯವಾಗಿ ವರ್ತನೆ ಮಾಡಿದರು ಎನ್ನುವುದನ್ನು. ಈ ರೀತಿಯಾಗಿ ನಡೆದುಕೊಳ್ಳುವುದನ್ನು ಮೊದಲು ತಪ್ಪಿಸಬೇಕು. ಆದ್ದರಿಂದ ಹೊಸದಾಗಿ ಕೆಲಸಕ್ಕೆ ಹಾಜರಾಗುತ್ತಿರುವ ನೀವುಗಳು ಮಾನವೀಯತೆಯನ್ನು ರೂಢಿಸಿಕೊಳ್ಳಿ ಎಂದು ಸಲಹೆಯನ್ನು ನೀಡಿದರು.
ಮುಂದಿನ ದಿನಮಾನದಲ್ಲಿ ಪುರುಷ ಹಾಗೂ ಮಹಿಳಾ ಪೆÇಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಒಟ್ಟಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದ್ದು, ಇದು ಸದ್ಯದಲ್ಲೇ ಅನುಷ್ಠಾನಕ್ಕೆ ಬರಲಿದೆ. ಪೆÇಲೀಸ್ ಇಲಾಖೆಯಲ್ಲಿ ಲಿಂಗ ಸಮಾನತೆಯನ್ನು ತರಬೇಕು ಹಾಗೂ ಮಹಿಳಾ ಪೆÇಲೀಸ್ ಸಿಬ್ಬಂದಿಗಳನ್ನು ಬಲವರ್ಧನೆಗೊಳಿಸಬೇಕು ಎನ್ನುವ ದೃಷ್ಟಿಯಿಂದ ಇಬ್ಬರಿಗೂ ಸಮಾನವಾಗಿ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯಲ್ಲೂ ಯಾವುದೇ ಬೇಧ-ಭಾವ ಇರುವುದಿಲ್ಲ. ಏಕೆಂದರೆ ಮಹಿಳಾ ಪೆÇಲೀಸರು ಪ್ರಸ್ತುತ ತರಬೇತಿಯಲ್ಲಿ 9 ಎಂ.ಎಂ. ಪಿಸ್ತೂಲ್ ಬಳಕೆ ಮಾಡುವುದನ್ನು ಕಲಿತಿದ್ದಾರೆ. 10 ಕಿಲೋ ಮೀಟರ್ ದೂರವನ್ನು 70 ನಿಮಿಷದಲ್ಲಿ ಓಡುತ್ತಿದ್ದಾರೆ. ಆದ್ದರಿಂದ ಇಬ್ಬರಿಗೂ ಒಂದೇ ಮಾದರಿಯ ಅಗತ್ಯ ತರಬೇತಿ ದೊರೆಯುತ್ತಿದೆ. ಹೀಗಾಗಿ ಒಟ್ಟಿಗೆ ತರಬೇತಿ ನೀಡಲು ಇಲಾಖೆಯು ಮುಂದಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರು: ತರಬೇತಿ ಸಮಯದಲ್ಲಿ ವಿವಿಧ ವಿಭಾಗದಲ್ಲಿ ಉತ್ತಮ ಪ್ರದರ್ಶನ ನಿರ್ವಹಣೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪುರಸ್ಕಾರ ನೀಡಲಾಯಿತು.
ತುಮಕೂರು ಜಿಲ್ಲೆಯ ಕೆ.ಜಿ.ಪವಿತ್ರಾ ಎಲ್ಲ ವಿಭಾಗದಲ್ಲಿ ಅತ್ಯುನ್ನತ ಪ್ರದರ್ಶನ ಪುರಸ್ಕಾರವನ್ನು ಪಡೆದುಕೊಂಡರು. ವಿಜಯನಗರ ಜಿಲ್ಲೆಯ ರೇಷ್ಮಾ ಎಂ.ರಾಥೋಡ್ (ಪ್ರ), ಬೆಂಗಳೂರು ನಗರದ ಕುಸುಮಾ ಚನ್ನಪ್ಪ ಲಮಾಣಿ ಒಳಾಂಗಣ ವಿಭಾಗದ ಪ್ರಶಸ್ತಿಗಳಿಸಿದರು. ತುಮಕೂರು ಜಿಲ್ಲೆಯ ಕೆ.ಜಿ.ಪವಿತ್ರಾ (ಪ್ರ), ಬೆಂಗಳೂರು ನಗರದ ಕುಸುಮಾ ಚನ್ನಪ್ಪ ಲಮಾಣಿ (ದ್ವಿ) ಹೊರಾಂಗಣ ವಿಭಾಗದ ಪ್ರಶಸ್ತಿಗಳಿಸಿದರು. ಶಿವಮೊಗ್ಗ ಜಿಲ್ಲೆಯ ಮೇಘನ ರವಿಕುಮಾರ್ ನಾಯ್ಕ (ಪ್ರ), ಬೆಂಗಳೂರು ನಗರ ಕೇಂದ್ರ ವಿಭಾಗದ ಟಿ.ಪೂರ್ಣಿಮಾ (ದ್ವಿ) ಎಸ್ಎಲ್ಆರ್ ಫೈರಿಂಗ್ ಪ್ರಶಸ್ತಿಗಳಿಸಿದರು. ಬೆಂಗಳೂರು ನಗರ ಈಶಾನ್ಯ ವಿಭಾಗದ ಎಚ್.ಬಿ.ಧನ್ಯ (ಪ್ರ), ಮೈಸೂರುನಗರದ ಎಸ್.ಎನ್.ಚೈತ್ರಾ (ದಿ) 9 ಎಂಎಂ ಪಿಸ್ತೂಲ್ ಫೈರಿಂಗ್ ಪ್ರಶಸ್ತಿ ಪಡೆದುಕೊಂಡರು.
ಕನ್ನಡಮಯ ಪಥ ಸಂಚಲನ: ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಕನ್ನಡಮಯವಾಗಿತ್ತು. ಈ ಹಿಂದಿನ ಪಥ ಸಂಚಲನಗಳಲ್ಲಿ ಆದೇಶಗಳು, ಸೂಚನೆಗಳನ್ನು ಹಿಂದಿ ಭಾಷೆ ಅಥವಾ ಇಂಗ್ಲಿಷ್ ಭಾಷೆಯಲ್ಲಿ ನೀಡಲಾಗುತ್ತಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಎಲ್ಲ ಆದೇಶ-ಸೂಚನೆಗಳು, ಗೌರವ ಸ್ವೀಕಾರದ ಪ್ರತಿಕ್ರಿಯೆಯೂ ಕನ್ನಡದಲ್ಲೇ ನಡೆಯಿತು. ಪಥ ಸಂಚಲನದ ಪೂರ್ಣ ತಂಡವನ್ನು ಮುನ್ನಡೆಸುತ್ತಿದ್ದ ಕೆ.ಜಿ.ಪವಿತ್ರಾ ಅವರು ಉತ್ಕಂಠ ಸ್ವರದಲ್ಲಿ ನೀಡುತ್ತಿದ್ದ ಸೂಚನೆಗಳು ನೆರೆದಿದ್ದ ಎಲ್ಲರಿಗೂ ರೋಮಾಂಚನಗೊಳಿಸುವಂತೆ ಇತ್ತು.
ಪೆÇಲೀಸ್ ತರಬೇತಿ ಶಾಲೆಯ ವರದಿಯನ್ನು ಪ್ರಾಂಶುಪಾಲೆ ಎಂ.ಎಸ್.ಗೀತಾ ಅವರು ವಾಚಿಸಿದರು.ದಕ್ಷಿಣ ವಲಯ ಐಜಿಪಿ ಡಾ.ಬಿ.ಎಂ.ಬೋರಲಿಂಗಯ್ಯ,ಕೆಪಿಎ ನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ , ಜರ್ಮನ್ ದೇಶದ ಬವೇರಿಯದ ಎಡಿಜಿಪಿ ಮ್ಯಾನ್ ಫೆಲ್ಡ್ ಗೀಗಲ್, ಎಎಸ್ಪಿ ರಾಲ್ಫ್ ಈರ್ನರ್, ಸೆಸ್ಕ್ ವಿಚಕ್ಷಣ ದಳದ ಎಸ್ಪಿ ಸವಿತಾ ಹೂಗಾರ್, ಡಿಸಿಪಿ ಆರ್.ಎನ್.ಬಿಂದುಮಣಿ, ಡಿವೈಎಸ್ಪಿ ಶಂಕರೇಗೌಡ ಮತ್ತಿತರರು ಹಾಜರಿದ್ದರು.




























