ಜನನ, ಮರಣ ಕಡ್ಡಾಯ ನೋಂದಾಯಿಸಿ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

ಉಡುಪಿ: ಜಿಲ್ಲೆಯಲ್ಲಿ ಘಟಿಸುವ ಪ್ರತಿಯೊಂದು ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ೨೧ ದಿನಗಳ ಒಳಗಾಗಿ ಕಡ್ಡಾಯವಾಗಿ ಸೂಕ್ತ ಪ್ರಾಧಿಕಾರದ ಮುಂದೆ ಪ್ರತಿಯೊಬ್ಬರೂ ನೋಂದಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದ್ದಾರೆ.
ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಆಗುವ ಪ್ರತಿಶತಃ ಜನನ, ಮರಣ ಮತ್ತು ನಿರ್ಜೀವ ಜನನಗಳ ಘಟನೆಗಳನ್ನು ವಿಳಂಬವಿಲ್ಲದೇ ನೋಂದಣಿ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಜನನ ಮತ್ತು ಮರಣ ನೋಂದಣಿಯು ಭವಿಷ್ಯದ ಕೆಲಸ ಕಾರ್ಯಗಳಿಗೆ ಇವುಗಳ ಪ್ರಮಾಣಪತ್ರವು ಅವಶ್ಯವಿರುತ್ತದೆ. ಇದನ್ನು ಮನಗಂಡು ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ೩೦ ದಿನಗಳವರೆಗೆ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು, ನಗರ ವ್ಯಾಪ್ತಿಗಳಲ್ಲಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಬಂಧಪಟ್ಟ ವೈದ್ಯಾಧಿಕಾರಿಗಳು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರುಗಳು ಜನನ-ಮರಣ ನೋಂದಣಾಧಿಕಾರಿಗಳಾಗಿದ್ದು, ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ೩೧೩ ಹಾಗೂ ನಗರ ಪ್ರದೇಶದಲ್ಲಿ ೧೩ ಸೇರಿದಂತೆ ಒಟ್ಟು ೩೨೬ ನೋಂದಣಿ ಘಟಕಗಳು ಇವೆ ಎಂದರು.ಜನನ, ಮರಣ ಹಾಗೂ ನಿರ್ಜೀವ ಜನನಗಳ ನೋಂದಣಿಯು ೨೧ ದಿನಗಳ ಒಳಗಾಗಿ ಯಾವುದೇ ಶುಲ್ಕವಿಲ್ಲದೇ ನೋಂದಾಯಿಸಲು ಅವಕಾಶವಿದೆ. ಘಟನೆ ಸಂಭವಿಸಿ ೨೧ ರಿಂದ ೩೦ ದಿನಗಳ ವರೆಗೆ ೨೦ ರು.ಗಳು, ಘಟನೆ ಸಂಭವಿಸಿದ ೩೦ ದಿನಗಳ ನಂತರ ಒಂದು ವರ್ಷದ ವರೆಗೆ ೫೦ ರು. ಶುಲ್ಕ ಪಾವತಿಸಿ, ಘಟನೆ ಸಂಭವಿಸಿದ ೧ ವರ್ಷದ ನಂತರ ನ್ಯಾಯಾಲಯದ ಆದೇಶದೊಂದಿಗೆ ೧೦ ರು ಗಳ ಶುಲ್ಕ ಪಾವತಿಸಿ, ನೋಂದಾಯಿಸಬಹುದಾಗಿದೆ ಎಂದರು.ಯಾವುದೇ ಮಗುವಿನ ಜನನವನ್ನು ಹೆಸರಿಲ್ಲದೇ ನೋಂದಣಿ ಮಾಡಲು ಅವಕಾಶವಿದ್ದು, ಹೆಸರಿಲ್ಲದೇ ನೋಂದಾಯಿಸಿದ್ದಲ್ಲಿ ಆ ದಿನದಿಂದ ೧೨ ತಿಂಗಳ ಒಳಗಾಗಿ ಮಗುವಿನ ಹೆಸರನ್ನು ಯಾವುದೇ ಶುಲ್ಕವಿಲ್ಲದೇ ರಿಜಿಸ್ಟರ್ ನಲ್ಲಿ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿರುತ್ತದೆ ಎಂದ ಅವರು, ಜನನ, ಮರಣ ನೋಂದಣಿ ದಾಖಲಾತಿಗಳಲ್ಲಿ ಯಾವುದೇ ಬದಲಾವಣೆ, ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ ಎಂದರು. ವಿದೇಶದಲ್ಲಿ ಜನಿಸಿದ ಮಗುವಿನ ಜನನವನ್ನು ವಿದೇಶದಲ್ಲಿ ನೋಂದಣಿ ಮಾಡಬಹುದು. ಆದರೆ ಶಿಶುವಿನ ಪೋಷಕರು ಭಾರತೀಯ ಪೌರರಾಗಿ ನಮ್ಮ ದೇಶದಲ್ಲಿ ನೆಲೆಸುವ ಉದ್ದೇಶ ಹೊಂದಿದ್ದಲ್ಲಿ ದೇಶಕ್ಕೆ ಹಿಂದಿರುಗಿದ ೬೦ ದಿನಗಳ ಒಳಗಾಗಿ ನೋಂದಣಿ ಮಾಡಿಸಬಹುದಾಗಿದೆ ಎಂದರು.
ಜನನ-ಮರಣ ಘಟನೆಗಳನ್ನು ಇ-ಜನ್ಮ ತಂತ್ರಾಶದ ಮೂಲಕ ನೋಂದಣಿ ಮಾಡುವ ಕಾರ್ಯವನ್ನು ೨೦೧೫ ರಿಂದಲೇ ಪ್ರಾರಂಭಿಸಲಾಗಿದೆ. ಈ ಕಾರ್ಯವನ್ನು ಯಾವುದೇ ಲೋಪವಿಲ್ಲದಂತೆ ಮಾಡಬೇಕು ಎಂದ ಅವರು, ಎಲ್ಲಾ ನೋಂದಣಿ ಘಟಕಗಳು ನಿಯಮಾನುಸಾರ ನೋಂದಣಿ ಕಾರ್ಯಗಳು ನಡೆಯುತ್ತಿರುವ ಬಗ್ಗೆ ಹಾಗೂ ಶೇಕಡ ನೂರರಷ್ಟು ನೋಂದಾವಣೆ ಮಾಡುತ್ತಿರುವ ಬಗ್ಗೆ ಕಂದಾಯ, ನಗರಾಭಿವೃದ್ಧಿ, ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಆಗಿಂದಾಗ್ಗೆ ಪರಿಶೀಲನೆ ನಡೆಸಬೇಕು. ಸಕಾಲದಲ್ಲಿ ಜನನ ಮರಣ ಪ್ರಮಾಣಪತ್ರವನ್ನು ವಿತರಿಸಬೇಕು ಎಂದರು.
ಕಳೆದ ಸಾಲಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ೧೧೮೫, ನಗರ ವ್ಯಾಪ್ತಿಯಲ್ಲಿ ೯೯೭೬ ಒಟ್ಟು ೧೧೧೬೧ ಜನನ ಘಟನೆಗಳು ನೋಂದಾವಣೆಯಾದರೆ, ಗ್ರಾಮೀಣ ಪ್ರದೇಶದಲ್ಲಿ ೭೨೬೯, ನಗರ ಪ್ರದೇಶದಲ್ಲಿ ೫೦೦೦ ಒಟ್ಟು ೧೨,೨೬೯ ಮರಣ ಘಟನೆಗಳು ನೋಂದಾವಣೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ೬೧ ನಿರ್ಜೀವ ಜನನಗಳು ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಹೆಣ್ಣು ಮತ್ತು ಗಂಡಿನ ಅನುಪಾತವು ೯೭೬ ರಷ್ಟಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಮ್.ವಿ ದೊಡಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.