
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜ.07:- ಸುತ್ತೂರು ಶ್ರೀಕ್ಷೇತ್ರದಲ್ಲಿ ಜ. 15 ರಿಂದ 20 ರವರೆಗೆ ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಪ್ರಚಾರ ರಥ ಚಾಮರಾಜನಗರಕ್ಕೆ ಆಗಮಿಸಿದ್ದು, ಜೆಎಸ್ಎಸ್ ಕಾಲೇಜು ಅವರಣದಲ್ಲಿ ಸ್ವಾಗತಿಸಿ, ನಂತರ ಗಣ್ಯರು ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಕಳುಹಿಸಿಕೊಟ್ಟರು.
ನಗರದ ಜೆಎಸ್ಎಸ್ ಕಾಲೇಜು ಅವರಣಕ್ಕೆ ಆಗಮಿಸುತ್ತಿದ್ದಂತೆ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಸಂಯೋಜಕ ಆರ್.ಎಂ.ಸ್ವಾಮಿ ಬರ ಮಾಡಿಕೊಂಡು ವಿಶೇಷವಾಗಿ ಹೂವುಗಳಿಂದ ಅಲಂಕೃತಗೊಳಿಸಿ ಬಾಳೆಕಂದು ಕಟ್ಟಿ ಪೂಜೆ ಸಲ್ಲಿಸಿ, ಈಡುಗಾಯಿ ಹೊಡೆದು ಪ್ರಚಾರ ರಥಕ್ಕೆ ಚಾಲನೆ ನೀಡಿದರು.
ಹರವೆ ಮಠ ಶ್ರೀ ಸರ್ಪಭೂಷಣಸ್ವಾಮೀಜಿ ಪ್ರಚಾರ ರಥದ ಮುಂಭಾಗದಲ್ಲಿದ್ದ ಶ್ರೀ ಶಿವರಾತ್ರಿಶ್ವರಶಿವಯೋಗಿಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಸರ್ಪ ಭೂಷಣಸ್ವಾಮೀಜಿಗಳು ಸುತ್ತೂರು ಜಾತ್ರೆ ಎಂದರೆ ವಿಶೇಷ. ಗ್ರಾಮೀಣ ಸೊಗಡು ಹಾಗೂ ಎಲ್ಲಾ ಕ್ಷೇತ್ರಗಳ ಗಣ್ಯರು ಜಾತ್ರೆಯಲ್ಲಿ ಭಾಗವಹಿಸುವುದು ವಿಶೇಷವಾಗಿದೆ. ಜಾತ್ರೆ ಮಹೋತ್ಸವ ಐದು ದಿನಗಳ ಕಾಲ ಮೈಸೂರು ಭಾಗದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಜ.15 ರಿಂದ ಆರಂಭವಾಗುವ ಜಾತ್ರೆಯಲ್ಲಿ ಮೊದಲ ದಿನ ಉತ್ಸವ ಮೂರ್ತಿ ಗದ್ದುಗೆಗೆ ಬಿಜಯಂಗೈಸುವುದು. ಜ.16ರರಂದು ಹಾಲರವಿ ಉತ್ಸವ, ಶ್ರೀ ಸೋಮೇಶ್ವರಸ್ವಾಮಿ ಕುಂಬಾಭಿಷೇಕ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, ಜ.17 ರಂದು ರಥೋತ್ಸವ, 18 ರಂದು ಮಹದೇಶ್ವರ ಕೊಂಡೊತ್ಸವ, ಲಕ್ಷ ದೀಪೋತ್ಸವ, ಶ್ರೀ ಮಹದೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ, ಜ.19 ರಂದು ತೆಪ್ಪೋತ್ಸವ, ಜ.20 ರಂದು ಅನ್ನ ಬ್ರಹ್ಮೋತ್ಸವದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಈ ಐದು ದಿನಗಳ ಕಾಲ ಸಾಮೂಹಿಕ ವಿವಾಹ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ, ರಂಗೋಲಿ, ಸೋಬಾನೆ ಪದ, ಗಾಳಿಪಟ, ಚಿತ್ರಕಲೆ, ರಾಗಿ ಬೀಸುವ ಸ್ಪರ್ಧೆ, ವಸ್ತುಪ್ರದರ್ಶನ, ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತದೆ. ಈ ಐದು ದಿನಗಳ ಜಾತ್ರೆ ಮಹೋತ್ಸವದಲ್ಲಿ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರುತ್ತೇವೆ.
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ನಗರಸಭೆ ಮಾಜಿ ಸದಸ್ಯೆ ಲಕ್ಷ್ಮಮ್ಮ, ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು, ಡಾ. ಪರಮೇಶ್ವರಪ್ಪ, ಹೊಸೂರು ನಟೇಶ್, ಕಿಲಗೆರೆ ಚಂದ್ರಶೇಖರ್, ಡಿ. ನಾಗೇಂದ್ರ, ಬಿ.ಕೆ. ರವಿಕುಮಾರ್, ಆಲೂರು ಮಲ್ಲು, ಕೆ. ವೀರಭದ್ರಸ್ವಾಮಿ, ಮಲ್ಲಿಕಾರ್ಜುಸ್ವಾಮಿ, ಲಿಂಗರಾಜು ಆರ್.ಎಸ್. ಪ್ರಾಂಶುಪಾಲರಾದ ಮಹದೇವಸ್ವಾಮಿ, ದೇವರಾಜು, ಎಚ್.ಎಂ. ಉಮೇಶ್ ಅಧ್ಯಾಪಕರು, ಶಿಕ್ಷಕರು ಸಿಬ್ಬಂದಿಗಳು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




























