Home ಸುದ್ದಿ ರಾಷ್ಟ್ರೀಯ ಕೇರಳ: ಯುವ ಮತದಾರರ ಸೆಳೆಯಲು ಆಯೋಗ ಕಸರತ್ತು

ಕೇರಳ: ಯುವ ಮತದಾರರ ಸೆಳೆಯಲು ಆಯೋಗ ಕಸರತ್ತು

ತಿರುವನಂತಪುರಂ, ಏ.4-ಇದೇ ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು, ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯನ್ನು “ಹಬ್ಬ”ವನ್ನಾಗಿ ಪರಿವರ್ತಿಸಲು ಒಂದು ವಿಶಿಷ್ಟ ಉಪಕ್ರಮವನ್ನು ಕೈಗೊಂಡಿದೆ. ಆಯೋಗವು ಉಚಿತ ಉಬರ್ ಸೇವೆ, ಹಲ್ವಾ (ಸಿಹಿ ಖಾದ್ಯ) ಮತ್ತು ಒಂದು ರೂಪಾಯಿಗೆ ಅಕ್ಕಿ ಹಿಟ್ಟು ಮುಂತಾದ ಆಕರ್ಷಕ ಯೋಜನೆಗಳನ್ನು ಹಮ್ಮಿಕೊಂಡಿದೆ.


ಕೇರಳದ ಮುಖ್ಯ ಚುನಾವಣಾ ಅಧಿಕಾರಿ ರತನ್ ಯು ಕೇಳ್ಕರ್ ಮಾತನಾಡಿ ನಾವು ವಿವಿಧ ವಿಧಾನಗಳ ಮೂಲಕ ಯುವಕರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿದ್ದೇವೆ, ಉದಾಹರಣೆಗೆ ಮತದಾನದ ದಿನದಂದು ಪ್ರತಿ ಜಿಲ್ಲೆಯಲ್ಲೂ ಮೊದಲ ಬಾರಿಗೆ ಮತದಾರರಿಗೆ ಹಲ್ವಾ ನೀಡುವುದು, ಎರ್ನಾಕುಲಂ ಮತ್ತು ತಿರುವನಂತಪುರಂನಲ್ಲಿರುವ ಮತದಾರರ ಮನೆಗಳಿಂದ ಎರಡು ಕಿಲೋಮೀಟರ್ ವ್ಯಾಪ್ತಿಯೊಳಗಿನ ಮತಗಟ್ಟೆಗಳಿಗೆ ಉಬರ್ ಉಚಿತ ಸವಾರಿಯನ್ನು ನೀಡುತ್ತಿದೆ. ಅದಕ್ಕಿಂತ ಹೆಚ್ಚಿನ ದೂರಕ್ಕೆ ಶುಲ್ಕ ವಿಧಿಸಲಾಗುತ್ತದೆ.
`ಸಪ್ಲೈಕೊ’ ಏಪ್ರಿಲ್ 10 ಮತ್ತು 11 ರಂದು ಗ್ರಾಹಕರಿಗೆ ಒಂದು ರೂಪಾಯಿಗೆ ಅಕ್ಕಿ ಹಿಟ್ಟನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.


ಅದೇ ಸಮಯದಲ್ಲಿ, ಸ್ಟಾರ್‍ಬಕ್ಸ್ ಮತ್ತು ಕೆಫೆ ಕಾಫಿ ಡೇ ನಂತಹ ಸಂಸ್ಥೆಗಳು ಮತದಾರರಿಗೆ ರಿಯಾಯಿತಿಗಳನ್ನು ನೀಡುವ ಬಗ್ಗೆಯೂ ಯೋಚಿಸುತ್ತಿವೆ ಎಂದಿದ್ದಾರೆ.
ಯುವ ಮತದಾರರು ಮತದಾನಕ್ಕೆ ಬರುವಂತೆ ಪ್ರೇರೇಪಿಸುವ ವ್ಯಾಪಕ ಕ್ರಮಗಳಲ್ಲಿ ಬ್ಲಿಂಕಿಟ್, ಸ್ವಿಗ್ಗಿ, ಜೊಮಾಟೊ ಮತ್ತು ಡೊಮಿನೊಸ್‍ನಂತಹ ಆನ್‍ಲೈನ್ ಆಹಾರ ಮತ್ತು ಪಡಿತರ ವಿತರಣಾ ಸೇವೆಗಳ ಮೂಲಕ ಸಕಾರಾತ್ಮಕ ಸಂದೇಶ ಕಳುಹಿಸುವುದು, ಸ್ಟಾರ್‍ಬಕ್ಸ್ ಮತ್ತು ಕೆಫೆ ಕಾಫಿ ಡೇ ನಂತಹ ಕಾಫಿ ಅಂಗಡಿಗಳಲ್ಲಿ ಸಂಭಾವ್ಯ ರಿಯಾಯಿತಿಗಳು, ಕೃತಕ ಬುದ್ಧಿಮತ್ತೆ (ಎಐ)-ರಚಿತ ವೀಡಿಯೊಗಳು, ರೀಲ್‍ಗಳು, ಸ್ಪರ್ಧೆಗಳು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಇತ್ತೀಚೆಗೆ ಬಿಡುಗಡೆ ಮಾಡಿದ ‘ಜಿನ್ ಜಡ್ ಆಂಥೆಮ್’ ಸೇರಿವೆ.


ಈ ಪ್ರಯತ್ನಗಳು ಯುವ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಪ್ರೇರೇಪಿಸುವುದಲ್ಲದೆ, ರಾಜ್ಯದಲ್ಲಿ ಒಟ್ಟಾರೆ ಮತದಾನದ ಶೇಕಡಾವಾರು ಶೇಕಡಾ 90 ಕ್ಕೆ ತಲುಪುತ್ತದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಆಶಿಸಿದ್ದಾರೆ.