ಕೇರಳಕ್ಕೆ ಅಕ್ರಮ ತಂಬಾಕು ಸಾಗಾಟ – ಇಬ್ಬರ ಬಂಧನ

ಕಾಸರಗೋಡು-ಕರ್ನಾಟಕದಿಂದ ಕೇರಳಕ್ಕೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು ಎರಡು ಲಕ್ಷ ರೂ. ಮೌಲ್ಯದ ತಂಬಾಕು ಉತ್ಪನ್ನಗಳನ್ನು ಮಂಜೇಶ್ವರ ಅಬಕಾರಿ ದಳದ ಸಿಬಂದಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ವಡಗರದ ಅಫ್ಜಲ್ (೩೨) ಮತ್ತು ಅಶ್ರಫ್ (೩೦) ಬಂಧಿತರು. ಬುಧವಾರ ಮಂಜೇಶ್ವರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು ೨೧೪ ಕಿಲೋ ತಂಬಾಕು ಉತ್ಪನ್ನ ಪತ್ತೆಯಾಗಿದೆ.
ಕೇರಳದ ಹಲವೆಡೆಗಳಿಗೆ ಇವರು ತಂಬಾಕು ಉತ್ಪನ್ನಗಳನ್ನು ಸಾಗಿಸಿ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಕೇರಳದಲ್ಲಿ ನಿಷೇಧ ಗೊಂಡಿರುವ ತಂಬಾಕು ಉತ್ಪನ್ನಗಳನ್ನು ಕೇರಳಕ್ಕೆ ಅಕ್ರಮವಾಗಿ ತಂದು ಮಾರಾಟ ಮಾಡುವ ಜಾಲದವರು ಎಂದು ಪೊಲೀಸರು ತಿಳಿಸಿದ್ದಾರೆ.