
ಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಕೃಷಿ ಇಲಾಖೆಯ ಹೆಸರನ್ನು ಬಳಸಿಕೊಂಡು ಖಾಸಗಿ ಸಂಸ್ಥೆಯೊಂದು ರೈತರಿಂದ ದುಡ್ಡು ವಸೂಲಿ ಮಾಡುತ್ತಿದೆ. ಈ ಸಂಸ್ಥೆಗೂ ಕೃಷಿ ಇಲಾಖೆಗೂ ಏನು ಸಂಬಂಧ ಎಂದು ಸ್ಪಷ್ಟೀಕರಿಸಬೇಕು ಎಂದು ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಸಂಘಟನೆಯ ಮುಖಂಡ ಕೊರಗಪ್ಪ ಪ್ರಶ್ನಿಸಿದರು.
ತಹಶೀಲ್ದಾರ್ ಎಸ್.ಬಿ ಕೂಡಲಗಿ ಅಧ್ಯಕ್ಷತೆಯಲ್ಲಿ ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ರೈತರಿಗೆ ಅಗತ್ಯವಾದ ಏಣಿ ಮತ್ತು ದೋಟಿಯನ್ನು ಮಾರಾಟಮಾಡುವ ಈ ಸಂಸ್ಥೆ ರೂ.೧ ಸಾವಿರ ಜನತೆಯಿಂದ ವಸೂಲಿ ಮಾಡುತ್ತಿದ್ದಾರೆ. ಅದಕ್ಕೆ ಕೃಷಿ ಇಲಾಖೆಯ ಹೆಸರನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಕೃಷಿಇಲಾಖೆ ಯಾಕೆ ಈ ಸಂಸ್ಥೆಯ ಮೂಲಕ ಹಣ ಸಂಗ್ರಹ ಮಾಡುತ್ತಿದೆ. ಇದರಲ್ಲಿ ಕೃಷಿಸಖಿಯರು ಕೂಡಾ ಪಾಲ್ಗೊಳ್ಳುತ್ತಿದ್ದಾರೆ. ಹಾಗಾಗಿ ರೈತರು ಇದನ್ನು ಕೃಷಿಇಲಾಖೆ ಎಂದೇ ನಂಬುವಂತಾಗಿದೆ. ನಿಜಕ್ಕೂ ಇದು ಕೃಷಿ ಇಲಾಖೆಯ ಕೆಲಸವೇ ಅಥವಾ ಇಲಾಖೆಯ ಹೆಸರಲ್ಲಿ ಖಾಸಗಿ ಸಂಸ್ಥೆ ಹಣ ದೋಚುತ್ತಿದೆಯಾ ಎಂಬುವುದು ಸ್ಪಷ್ಟವಾಗಬೇಕು ಎಂದು ಅವರು ಆಗ್ರಹಿಸಿದರು. ಆದರೆ ಇದಕ್ಕೆ ಉತ್ತರಿಸಲು ಕೃಷಿಇಲಾಖೆಯ ಅಧಿಕಾರಿ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಕೃಷಿ ಇಲಾಖೆಗೆ ಸಂಬಂಧವಿಲ್ಲ..
ಈ ಬಗ್ಗೆ ಪತ್ರಿಕೆ ಪುತ್ತೂರು ಸಹಾಯಕಕೃಷಿ ಕೃಷಿನಿರ್ದೇಶಕ ಚೆಲುವರಂಗಪ್ಪ ಅವರನ್ನು ಪ್ರಶ್ನಿಸಿದಾಗ ಇಂತಹದ್ದೊಂದು ಯೋಜನೆ ಕೃಷಿ ಇಲಾಖೆಯಲ್ಲಿ ಇಲ್ಲ. ಒಂದುವೇಳೆ ಇದ್ದರೂ ಕೃಷಿಕೇಂದ್ರಗಳ ಮೂಲಕವೇ ನೀಡಲಾಗುತ್ತದೆ. ಇದು ಖಾಸಗಿ ಸಂಸ್ಥೆ ಮಾಡುತ್ತಿರುವ ಕೆಲಸವಾಗಿದೆ. ಈ ಸಂಸ್ಥೆಗೂ ಕೃಷಿ ಇಲಾಖೆಗೂ ಯಾವುದೇ ತರಹದ ಸಂಬಂಧ ಇಲ್ಲ. ವಾಸ್ತವವಾಗಿ ಬಂಟ್ವಾಳ ತಾಲೂಕಿನ ಕೃಷಿ ಇಲಾಖೆಯ ವ್ಯಾಪ್ತಿಗೆ ವಿಟ್ಲ ಹೋಬಳಿ ಬರುತ್ತದೆ. ಹಾಗಿದ್ದರೂ ಅಂತಹದ್ದೊಂದು ಕಾರ್ಯಕ್ರಮ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದರಲ್ಲಿ ಕೃಷಿಸಖಿಯರು ಪಾಲ್ಗೊಳ್ಳುವ ಬಗ್ಗೆ ಪ್ರಶ್ನಿಸಿದಾಗ ಕೃಷಿಸಖಿಯರನ್ನು ನೇಮಕ ಮಾಡಿಕೊಳ್ಳುವುದು ತಾಪಂ. ಅವರಿಗೆ ತಿಂಗಳ ಗೌರವಧನ ಪಾವತಿ ಮಾಡುವುದೂ ತಾಪಂ. ಈ ಕೃಷಿ ಸಖಿಯರನ್ನು ಖಾಸಗಿ ಸಂಸ್ಥೆ ಬಳಿಸಿಕೊಂಡಿರಬಹುದು. ಆದರೆ ಇದರಿಂದ ಕೃಷಿ ಇಲಾಖೆಯ ಹೆಸರಿಗೆ ಕಳಂಕ ಉಂಟಾಗುತ್ತದೆ. ಹಾಗಾಗಿ ಬಂಟ್ವಾಳ ತಾಪಂ ಹಾಗೂ ಕೃಷಿ ಇಲಾಖೆ ಈ ಬಗ್ಗೆ ತಕ್ಷಣ ಸೂಕ್ತ ಕ್ರಮಕ್ಕೆ ಮುಂದಾದರೆ ಸಮಸ್ಯೆ ಪರಿಹಾರವಾಗಬಹುದು ಎಂದು ತಿಳಿಸಿದರು.























