ಎಲ್ಲಾವುದಕ್ಕೂ ಮಣ್ಣೇ ಮೂಲ ಅದರ  ರಹಸ್ಯವನ್ನು  ಅರಿಯಬೇಕು : ಕೊಟ್ಟೂರು ಬಸವಲಿಂಗಸ್ವಾಮಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ. ೧೪:
ಮಣ್ಣಿಂದಲೇ ಎಲ್ಲಾವದೂ ಎಂದು ಎಲ್ಲರೂ ತಿಳಿದು ಮಣ್ಣಿನಲ್ಲಿರುವ ರಹಸ್ಯಗಳನ್ನು ತಿಳಿಯುವ ಪ್ರಯತ್ನ ಅರಿಯಬೇಕು ಎಂದು ಕೊಟ್ಟೂರು  ಸಂಸ್ಥಾನಮಠದ  ಬಸವಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ.
ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 158ನೆಯ, ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ 87ನೇ ಜಯಂತ್ಯೋತ್ಸವದ ಅಂಗವಾಗಿ ನಿನ್ನೆ ಸಂಜೆ  ಸೋಮಸಮುದ್ರದಿಂದ ಶ್ರೀಧರಗಡ್ಡೆ ಮತ್ತು ಬಳ್ಳಾರಿಯ ಶ್ರೀಮಠದವರೆಗೆ ವಿವಿಧ ವಿವಿಧ ಗ್ರಾಮಗಳಿಂದ ಆಗಮಿಸಿದ ಪಾದಯಾತ್ರೆ ಮತ್ತು `ಹಂಪೆ ಹೇಮಕೂಟ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಕೊಟ್ಟೂರಸ್ವಾಮಿ ಗುರುಪರಂಪರೆ’ ಗ್ರಂಥ ಲೋಕಾರ್ಪಣೆ – ಸನ್ಮಾನ ಸಮಾರಂಭ ಹಾಗೂ ಪ್ರವಚನ ಮಂಗಲದಲ್ಲಿ  ಅವರು ಆಶೀರ್ವಚನ ನೀಡಿದರು.
ನಮ್ಮ ಕಾಯ, ಕಾಯಕ ಮತ್ತು ಕರ್ಮ ಎಲ್ಲವೂ ಮಣ್ಣಿಂದಲೇ. ಮಣ್ಣನ್ನು ತಾತ್ಸಾರ ಮನೋಭಾವದಿಂದ ನೋಡಬಾರದು. ಮಣ್ಣಿನಲ್ಲಿ ಏನಿದೆ ಎನ್ನುವುದಕ್ಕಿಂತ ಮಣ್ಣಿನಲ್ಲಿರುವ ರಹಸ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಪ್ರತಿಯೊಬ್ಬರೂ ಮಣ್ಣಿನಿಂದಲೇ ಎಲ್ಲಾ ಎನ್ನುವ ಸತ್ಯವನ್ನು ತಿಳಿದುಕೊಳ್ಳಬೇಕು. ಯಾರೂ ಕೂಡ ಏನನ್ನೂ ತಿರಸ್ಕಾರ ಮನೋಭಾವದಿಂದ ಕಾಣದೇ, ಎಲ್ಲವುದನ್ನೂ ಸ್ವೀಕಾರ ಮನೋಭಾವದಿಂದ ಕೂಡಿರಬೇಕು ಎಂದರು.
ಮಾಜಿ ಸಚಿವ ಬಿ. ಶ್ರೀರಾಮುಲು ಗ್ರಂಥ ಲೋಪಾರ್ಪಣೆ ಮಾಡಿ, ಧರ್ಮ, ಸಂಘಟನೆ ಮತ್ತು ಸಂಸ್ಕಾರಕ್ಕಾಗಿ ಆಗಾಗ್ಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಬ್ರಿಟೀಶರ ಕಾಲದಲ್ಲಿ ಧರ್ಮ ಮತ್ತು ಒಗ್ಗಟ್ಟಿಗಾಗಿ ಹಾನಗಲ್ಲು ಶ್ರೀಗಳು ಸಾಕಷ್ಟು ಶ್ರಮಿಸಿದರು. ಶಿಕ್ಷಣದ ಮೂಲಕ ಸಮಾಜವನ್ನು ಸಂಘಟಿಸಿ, ಮಹಿಳಾ ಸಮಾನತೆಯನ್ನು ಜಾರಿಗೆ ತಂದವರು ಹಾನಗಲ್ಲು ಶ್ರೀಗಳು ಎಂದರು.
ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅತಿಥಿಗಳಾಗಿ, ಭಕ್ತಿ, ಧರ್ಮ ಮತ್ತು ಪರಂಪರೆಯು ಮುಂದುವರೆಯಲು ಕೊಟ್ಟೂರುಸ್ವಾಮಿ ಸಂಸ್ಥಾನ ಮಠವು ಸಾಕಷ್ಟು ಶ್ರಮಿಸುತ್ತಿದೆ ಎಂದರು.
ಕಮ್ಮರಚೇಡು ಕಲ್ಯಾಣ ಸ್ವಾಮಿ ಮಠದ ಕಲ್ಯಾಣಸ್ವಾಮಿಗಳು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ಸೋಮಸಮುದ್ರ ಸಿದ್ದಲಿಂಗ ಸ್ವಾಮಿಗಳು, ಸಿರಿಗೇರಿ – ಬೂದಗುಂಪ ಮಠದ ಸಿದ್ದೇಶ್ವರ ಸ್ವಾಮಿಗಳು, ಕುರುಗೋಡುನ ನಿರಂಜನಪ್ರಭು ಮಹಾಸ್ವಾಮಿಗಳು, ದರೂರಿನ ಕೊಟ್ಟೂರು ಮಹಾಸ್ವಾಮಿಗಳು, ಸಂಗನಹಾಳದ ವಿಶ್ವೇಶ್ವರ ದೇವರು ಅವರಿ ಸಾನಿಧ್ಯವಹಿಸಿದ್ದರು.
ಹಾನಗಲ್ಲು ಕಮಾರೇಶ್ವರರ ರಥೋತ್ಸವ ಮತ್ತು ಡಾ. ಸಂಗನಬಸವ ಮಹಾಸ್ವಾಮಿಗಳ ಸಾರೋಟ ಮೆರವಣಿಗೆಯು ಶ್ರೀಮಠದಿಂದ ಎಚ್.ಆರ್.ಜಿ ವೃತ್ತದಲ್ಲಿರುವ ಬಸವಣ್ಣನವರ ಪುತ್ಥಳಿವರೆಗೆ ಹೋಗಿ, ಶ್ರೀಮಠದಲ್ಲಿ ಸಮಾರೋಪಗೊಂಡಿತು.
 ಹಿರೇಮಠದ ಶಶಿಧರ ಶಾಸ್ತ್ರಿಗಳು ಪುರಾಣ ಮಂಗಲವಾಡಿದರು.ಗದಗನ  ಸಂಗಮೇಶ ಪಾಟೀಲ್ ಸಂಗೀತ ಸೇವೆ ಸಲ್ಲಿಸಿದರು. ಕಲ್ಬುರ್ಗಿ ಶಶಿಕುಮಾರ್ ಅವರು ತಬಲಾ ಸಾಥ್ ನೀಡಿದರು.
ಎಚ್.ಎಂ. ಗುರುಸಿದ್ದಸ್ವಾಮಿ, ಎನ್. ಅಯ್ಯಪ್ಪ, ಡಾ. ಕೆ.ಎಂ. ಮಹೇಶ್ವಸ್ವಾಮಿ, ಎಸ್. ಗುರುಲಿಂಗನಗೌಡ, ಕೋರಿ ವಿರೂಪಾಕ್ಷಪ್ಪ, ಕೋಳೂರು ತಿಮ್ಮನಗೌಡ ಪಾಟೀಲ್, ಡಾ. ನಿಷ್ಠಿ ರುದ್ರಪ್ಪ, ಕೇಣಿ ಬಸ್ಸಪ್ಪ, ಬಿಜೆಪಿ ಮುಖಂಡ ಪಿ. ಓಬಳೇಶ್ ಇನ್ನಿತರರು ಇದ್ದರು.ಶಿಕ್ಷಕ ಬಸವರಾಜ್ ಅಮಾತಿ  ಕಾರ್ಯಕ್ರಮ ನಿರೂಪಿಸಿದರು.