ಎರಡು ಮನೆಗಳಿಗೆ ಬಡಿದ ಸಿಡಿಲು; ೬ ಜನರಿಗೆ ಗಾಯ

ಮಂಗಳೂರು-ಎರಡು ಮನೆಗಳಿಗೆ ಸಿಡಿಲು ಬಡಿದು ಆರು ಮಂದಿ ಗಾಯಗೊಂಡಿರುವ ಘಟನೆ ಸುರತ್ಕಲ್ ಕಾಟಿಪಳ್ಳ ೯ನೇ ಬ್ಲಾಕ್ ಮಧ್ಯದ ಗುರುನಗರ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಭಾರತಿ(೩೦), ವಿನಯ(೩೫), ಕುಸುಮ(೫೫), ಹರಿಯಪ್ಪ(೬೭), ರವಿಕಲಾ (೬೦), ನಿತೀಶ್ (೩೫) ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ.
ಕಾಟಿಪಳ್ಳ ೯ನೇ ಬ್ಲಾಕ್ ಪರಿಸರದಲ್ಲಿ ಭಾನುವಾರ ರಾತ್ರಿ ಏಕಾಏಕಿ ಸಿಡಿಲು ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಈ ವೇಳೆ ಹರಿಯಪ್ಪ ಮತ್ತು ರವಿಕಲಾ ಎಂಬವರ ಮನೆಯ ವಿದ್ಯುತ್ ಸ್ವಿಚ್ ಬೋರ್ಡ್ ಗೆ ಸಿಡಿಲು ಬಡಿದೆ ಎಂದು ಹೇಳಲಾಗಿದೆ.
ಘಟನೆಯಿಂದ ಮನೆಯಲ್ಲಿದ್ದ ಎಲ್ಲಾ ಸ್ವಿಚ್ ಬೋರ್ಡ್ ಗಳು ಸಂಪೂರ್ಣ ಸುಟ್ಟುಹೋಗಿವೆ. ಮನೆಯ ನೆಲ, ಗೋಡೆ ಮತ್ತು ಮೇಲ್ಛಾವಣಿಗೆ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ.