
ಪುತ್ತೂರು; ಪಶ್ಚಿಮಘಟ್ಟದ ಕಾಡಂಚಿನಲ್ಲಿರುವ ಈ ಊರು ಪ್ರಕೃತಿಯ ನಡುವಿನ ತಾಣ. ಬಹುತೇಕ ಕೃಷಿ ಅವಲಂಬಿತ ಕುಟುಂಬಗಳೇ ಇಲ್ಲಿನ ನಿವಾಸಿಗಳು. ಅಡಿಕೆ ತೆಂಗು ಬಾಳೆ ರಬ್ಬರ್ ಕಾಳಮೆಣಸು ಹೀಗೆ ಹಲವು ಕೃಷಿಗಳನ್ನು ನಂಬಿಕೊಂಡು ಬದುಕುತ್ತಿರುವ ಇಲ್ಲಿನ ರೈತವರ್ಗಕ್ಕೆ ಕಳೆದ ೧೨ ವರ್ಷಗಳಿಂದ ಸಮಸ್ಯೆಯೊಂದು ಎಡೆಬಿಡದೆ ಕಾಡುತ್ತಿದೆ. ಹಲವಾರು ಜೀವಗಳೂ ಈ ಸಮಸ್ಯೆಗೆ ಬಲಿಯಾಗಿವೆ. ಅಪಾರ ಪ್ರಮಾಣದ ಕೃಷಿಗೆ ಹಾನಿಯಾಗಿದೆ. ಆದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಇದು ಐತ್ತೂರು ಎಂಬ ಗ್ರಾಮವನ್ನು ಕಾಡುವ ಆನೆ-ಚಿರತೆ ಸಮಸ್ಯೆ..!

brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;
ಐತ್ತೂರು ಗ್ರಾಮ ಮತ್ತು ಸುಮಾರು ೩೦೦ಕ್ಕೂ ಅಧಿಕ ಎಕರೆ ಪ್ರದೇಶದ ದಟ್ಟ ಕಾಡನ್ನು ಬೇರ್ಪಡಿಸುವ ಸುಮಾರು ೪೦೦ ಎಕರೆ ಪ್ರದೇಶದಲ್ಲಿ ಸರ್ಕಾರಿ ರಬ್ಬರ್ ಪ್ಲಾಂಟೇಶನ್ ಇದೆ. ಇದರ ಒಂದು ಭಾಗದಲ್ಲಿರುವ ಮರ್ಧಾಳದ ಬ್ರಾಂತಿಬೆಟ್ಟು ಎಂಬಲ್ಲಿಂದ ಹಿಡಿದು ಕೊನಾಜೆ ತನಕದ ಪ್ರದೇಶದ ಕೃಷಿಕರು ವಿಪರೀತವಾದ ಕಾಡಾನೆಗಳ ಉಪಟಳಕ್ಕೆ ಈಡಾಗುತ್ತಿದ್ದಾರೆ. ಜೀವಹಾನಿಯಂತಹ ಗಂಭೀರ ಘಟನೆ ನಡೆದಾಗ ಮಾತ್ರ ಎಚ್ಚರಗೊಳ್ಳುವ ಅರಣ್ಯ ಇಲಾಖೆ ಒಂದು ಬಾರಿ ಆನೆಯ ಹಿಂಡನ್ನು ಓಡಿಸುವ ಕೆಲಸ ಮಾಡಿ ಮತ್ತೆ ಮೌನವಾಗುತ್ತಾರೆ. ಮತ್ತೆ ಯಥಾ ಪ್ರಕಾರ ಆನೆ ದಾಳಿಗೆ ಕೃಷಿಕರು ಬಲಿಯಾಗುತ್ತಾರೆ. ಕೇವಲ ಆನೆ ಮಾತ್ರವಲ್ಲ. ಆಗಾಗ ಚಿರತೆಯ ಉಪಟಳವೂ ಇಲ್ಲಿ ಜನರನ್ನು ಕಾಡುತ್ತಿದೆ. ಇಲ್ಲಿನ ಶ್ರೀಲಂಕಾ ತಮಿಳು ನಿರಾಶ್ರಿತರ ಕಾಲೊನಿಗಳ ಅಂಗಳಕ್ಕೂ ಆನೆಗಳ ಹಿಂಡು ಬಂದು ಕಾಡುತ್ತವೆ. ರಾತ್ರಿ ಹೊರಭಾಗಕ್ಕೆ ಬರಲೂ ಇಲ್ಲಿನ ಮಂದಿ ಹೆದರುತ್ತಾರೆ. ರೈತವರ್ಗ ಕಾಡಾನೆಗಳ ಹಿಂಡು ಬಂದು ತೋಟವನ್ನು ಹಾಳುಮಾಡುತ್ತಿದ್ದರೆ ವೀಕ್ಷಕರಾಗಿಯೇ ಕುಳಿತುಕೊಳ್ಳಬೇಕಾಗುತ್ತದೆ. ಇಲ್ಲಿನ ಜನತೆ ಎಷ್ಟೇ ಹೋರಾಟಗಳನ್ನು ಮಾಡಿದರೂ ಅದು ಗೋರ್ಕಲ್ಲ ಮೇಲೆ ಮಳೆ ಸುರಿದಂತಾಗಿದೆ. ಆನೆಗಳ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ.
ಕಂದಕ ನಿರ್ಮಾಣವೇ ಪರಿಹಾರ
ದಟ್ಟ ಕಾಡಿನ ಭಾಗದಿಂದ ಆನೆಗಳು ಹಾಗೂ ಚಿರತೆಯಂತಹ ಅಪಾಯಕಾರಿ ಕಾಡುಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ಏಕೈಕ ಪರಿಹಾರವೆಂದರೆ ಸರಿಯಾದ ರೀತಿಯಲ್ಲಿ ಕಂದಕಗಳನ್ನು ನಿರ್ಮಿಸುವುದು. ಆದರೆ ಇದನ್ನು ದಟ್ಟ ಕಾಡಿನ ಅಂಚಿನಲ್ಲಿಯೇ ನಿರ್ಮಾಣ ಮಾಡಬೇಕು. ಯಾಕೆಂದರೆ ಅದರ ಪಕ್ಕದಲ್ಲಿ ಸರ್ಕಾರಿ ಪ್ರಾಯೋಜಿತ ರಬ್ಬರ್ ಪ್ಲಾಂಟೇಶನ್ ಇದೆ. ಈ ಪ್ಲಾಂಟೇಶನ್ ಗೆ ಕಾಡಾನೆಗಳು ಬಂದರೆ ಅದು ನೇರವಾಗಿ ರೈತನ ತೋಟಕ್ಕೆ ನುಗ್ಗುತ್ತವೆ. ವಾರದ ಹಿಂದೆ ಇಲ್ಲಿನ ತಿಮ್ಮಯ್ಯ ಗೌಡ ಎಂಬವರ ತೋಟಕ್ಕೆ ಬಂದ ಕಾಡಾನೆಗಳ ದಂಡು ೧೦೦ಕ್ಕೂ ಅಡಿಕೆ ಮರಗಳನ್ನು ನಾಶಮಾಡಿವೆ. ಇಲ್ಲಿನ ಬೆತ್ತೋಡಿಯಲ್ಲಿನ ನಿವಾಸಿ ಸಿ.ಪಿ.ಜೋನ್ ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮ ಕೃಷಿ ಪ್ರದೇಶದ ಒಂದು ಭಾಗದಲ್ಲಿ ಆಳವಾದ ಕಂದಕವನ್ನು (ಅಗಳು) ರಚಿಸಿದ್ದಾರೆ. ಕಂದಕ ರಚನೆಯ ಸಂದರ್ಭದಲ್ಲಿ ಕಾಡಿನತ್ತ ಮಣ್ಣು ಹಾಕದೆ ತಮ್ಮ ಕೃಷಿಭಾಗದತ್ತ ಹಾಕಿದ್ದಾರೆ. ಇಂತಹ ಕಂದಕವನ್ನು ದಟ್ಟ ಕಾಡಿನ ಬದಿಯಲ್ಲಿ ನಿರ್ಮಿಸಿದರೆ ಕಾಡಾನೆಗಳು ಬರುವುದನ್ನು ಖಂಡಿತಾ ತಡೆಯಬಹುದು. ಮಣ್ಣನ್ನು ಕಾಡಿನ ಭಾಗದತ್ತ ಹಾಕಿದರೆ ಆನೆಗಳು ಅದನ್ನು ಕೆಳಗೆ ದೂಡಿ ಅದೇ ದಾರಿಯನ್ನಾಗಿಸಿಕೊಂಡು ಊರಿನತ್ತ ಬರುತ್ತವೆ. ಅರಣ್ಯ ಇಲಾಖೆ ಈ ಕೃಷಿಕ ನಿರ್ಮಿಸಿದ ರೀತಿಯಲ್ಲಿ ಕಂದಕ ನಿರ್ಮಿಸಿದರೆ ಆನೆಗಳು ಬದುಕುತ್ತವೆ. ನಾವೂ ಬದುಕುತ್ತೇವೆ ಎನ್ನುವುದು ಇಲ್ಲಿನ ನಿವಾಸಿ ನಿವೃತ್ತ ಶಿಕ್ಷಕ ತಮ್ಮಯ್ಯ ಗೌಡ ಅವರ ಅಭಿಪ್ರಾಯ.
ದಟ್ಟ ಕಾಡಿನ ಭಾಗವನ್ನು ಬಿಟ್ಟು ರಬ್ಬರ್ ಪ್ಲಾಂಟೇಶನ್ ಹೊರಭಾಗದಲ್ಲಿ ಅಗಳು ನಿರ್ಮಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಯಾಕೆಂದರೆ ಈ ಭಾಗದಲ್ಲಿ ಅಲ್ಲಲ್ಲಿ ದಾರಿಗಳಿವೆ. ರಸ್ತೆಗಳಿವೆ. ನೀರು ಹರಿಯುವ ತೋಡುಗಳಿವೆ. ಪ್ಲಾಂಟೇಶನ್ನ ಹೊರಭಾಗದಲ್ಲಿ ಇಂತಹ ಸಮಸ್ಯೆ ಇಲ್ಲ. ಆ ಕಾಡಿನಲ್ಲಿ ಆನೆಗಳಿಗೆ ಬೇಕಾದ ಆಹಾರ ಕೊಡುವಂತಹ ಬಿದಿರು ಬೆಳೆಯಬಹುದು. ಅಲ್ಲಿ ಸಾಕಷ್ಟು ನೀರು ಇದೆ. ೩೦೦ ಹೆಚ್ಚು ಎಕರೆ ಪ್ರದೇಶದ ಕಾಡಿದೆ. ಹಾಗಾಗಿ ಅಲ್ಲಿಯೇ ಕಂದಕ ನಿರ್ಮಿಸಿದರೆ ಮಾತ್ರ ಆನೆಗಳನ್ನು ತಡೆಯಬಹುದು. ಇಲ್ಲವಾದರೆ ಸೋಲಾರ್ ಬೇಲಿ ನಿರ್ಮಿಸಿದರೂ ಆಗಬಹುದು. ಇದು ಶಾಶ್ವತ ಪರಿಹಾರವಾಗಬಹುದು ಎನ್ನುವುದು ಕೃಷಿಕ ಸಿ.ಪಿ ಜೋನ್ ಅವರ ಮಾತು.
ಕೃಷಿಕರಿಗೆ ಗನ್ ಪರವಾನಿಗೆ ಕೊಡಿ
ಇಲ್ಲಿನ ೧೦ ಮನೆಗಳಲ್ಲಿ ಕೋವಿ ಇದ್ದರೆ ಸುಮಾರು ೧೦೦ ಮನೆಗಳಿಗೆ ಪ್ರಯೋಜನವಾಗುತ್ತದೆ. ಕಾಡಾನೆಗಳು ಬಂದಾಗ ಕೋವಿ ಸಿಡಿಸಿ ಓಡಿಸಬಹುದು. ಆದರೆ ರೈತವರ್ಗಕ್ಕೆ ಈಗ ಕೋವಿ ಪರವಾನಿಗೆ ನೀಡುತ್ತಿಲ್ಲ. ಇದ್ದ ಕೋವಿಗಳ ಪರವಾನಿಗೆಯನ್ನು ರದ್ದು ಮಾಡಿದ್ದಾರೆ. ಸರ್ಕಾರ ಕಾಡಾನೆಗಳ ದಾಳಿಯನ್ನು ತಡೆಯಲು ಕನಿಷ್ಟ ಕೋವಿಗಳ ಪರವಾನಿಗೆಯನ್ನು ಸರಳೀಕರಣಗೊಳಿಸಿ ನೀಡಬೇಕು. ಕಡಬ ತಾಲೂಕನ್ನು ಆನೆಪೀಡಿತ ಪ್ರದೇಶ ಎಂದು ಘೋಷಿಸಿ ಇಲ್ಲಿಗೆ ಸೂಕ್ತ ಸಿಬಂದಿಗಳ ನೇಮಕ ಮಾಡಬೇಕು. ಆ ಮೂಲಕ ರೈತರ ಜೀವಹಾನಿ ತಡೆಯುವ ಹಾಗೂ ಬದುಕಿನ ಬೆಳೆಯಾದ ಕೃಷಿಯನ್ನು ಸಂರಕ್ಷಿಸುವ ಕೆಲಸ ಸರ್ಕಾರ ಮಾಡಬೇಕು- ಈರೇಶ್ ಗೌಡ ಐತ್ತೂರು ಗ್ರಾಪಂ ಸದಸ್ಯ.
ಮೇಘಾ ಪಾಲೆತ್ತಾಡಿ




























