Home Uncategorized ಎಐಎಂಎಸ್ಎಸ್ ನಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಎಐಎಂಎಸ್ಎಸ್ ನಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮಾ.09: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಗರದ  ಗಾಂಧಿಭವನದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್)  ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಐಎಂಎಸ್ಎಸ್ ನ  ರಾಜ್ಯಾಧ್ಯಕ್ಷರಾದ ಶ್ರೀಮತಿ ಎಂ. ಎನ್. ಮಂಜುಳಾ ರವರು  ಮಾತನಾಡುತ್ತಾ “ಮಾರ್ಚ್ 8- ಮಹಿಳಾ ದಿನವು ಒಂದು  ಐತಿಹಾಸಿಕ ದಿನವಾಗಿದ್ದು, ನಮ್ಮ ಸಂಘಟನೆ ಈ ದಿನವನ್ನು ಒಂದು ಅರ್ಥಪೂರ್ಣ ದಿನವಾಗಿ ದೇಶದಾದ್ಯಂತ  ವಿಭಿನ್ನ ರೀತಿಯಲ್ಲಿ ಆಚರಿಸುತ್ತಾ ಬಂದಿದೆ. ಇಂದಿನ ದಿನಗಳಲ್ಲಿ ಮಹಿಳಾ ದಿನವನ್ನು ಕೇವಲ ಮಹಿಳೆಯರ ವೈಯಕ್ತಿಕ  ಕರಕುಶಲತೆಯನ್ನು   ಹಾಗೂ ಚಾಕಚಕ್ಯತೆಯನ್ನು  ಹಾಡಿಹೊಗಳುವ ದಿನವಾಗಿ ವಿಜೃಂಭಿಸುತ್ತಿದ್ದಾರೆ. ಆದರೆ ಮಹಿಳಾ ದಿನದ ಇತಿಹಾಸವೆಂದರೆ ವಿಶ್ವದ ತುಳಿತಕ್ಕೊಳಗಾದ ಮಹಿಳೆಯರು ಸಂಘಟಿತ ಹೋರಾಟಕ್ಕೆ ಸಂಕಲ್ಪ ತೊಟ್ಟ ದಿನ. 1908 ಮಾರ್ಚ್ 8ರಂದು ಅಮೆರಿಕಾದ ನ್ಯೂಯಾರ್ಕಿನಲ್ಲಿ ಸಮಾನ ವೇತನಕ್ಕಾಗಿ ಹಾಗೂ ದುಡಿಮೆಯ ಕಾಲಾವಧಿ ದಿನಕ್ಕೆ 8 ಗಂಟೆಗಳನ್ನು ಮೀರಬಾರದೆಂದು ಒತ್ತಾಯಿಸಿ ದುಡಿಯುವ ಮಹಿಳೆಯರು ಬೀದಿಗಿಳಿದರು. ಕೊರೆಯುವ ಚಳಿಯನ್ನು ಲೆಕ್ಕಿಸದೆ 13 ವಾರಗಳ ಕಾಲ ಸುಮಾರು 20 ರಿಂದ 30 ಸಾವಿರ ಮಹಿಳಾ ಕಾರ್ಮಿಕರು ಹೋರಾಟ ನಡೆಸುತ್ತಿದ್ದ ನಿಶ್ಯಸ್ತ್ರ ಮಹಿಳೆಯರ ಮೇಲೆ ಅಲ್ಲಿನ ಸರ್ಕಾರ ಗುಂಡಿನ ಮಳೆಗರೆದಿದ್ದರ ಪರಿಣಾಮ ನ್ಯೂಯಾರ್ಕ್ ನ ಬೀದಿಗಳು ಕೆಂಪಾದವು. ಆದರೆ ಇದರಿಂದ ಮಹಿಳಾ ಹೋರಾಟ ಹೆಮ್ಮೆಟ್ಟುವ ಬದಲಿಗೆ ಇದು ಮುಂದಿನ ಅನೇಕ ಹೋರಾಟಗಳಿಗೆ ನಾಂದಿ ಹಾಡಿತು.  ಕೊನೆಗೆ 1910ರಲ್ಲಿ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್  ರವರು ಕೊಪೆನ್ ಹೆಗನ್ ನಲ್ಲಿ ನಡೆದ ಎರಡನೇ  ಅಂತರರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ನಲ್ಲಿ ಮಾರ್ಚ್ 8ನ್ನು ಅಂತರರಾಷ್ಟೀಯ ಮಹಿಳಾ ದಿನವಾಗಿ ಘೋಷಿಸಿದರು. ಅಂದಿನಿಂದ ಈ ದಿನವು ವಿಶ್ವದಾದ್ಯಂತ ಹೋರಾಟದ ದಿನವಾಗಿ ಆಚರಿಸಲ್ಪಡುತ್ತಿದೆ.

ಆದರೆ ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ  ಮಹಿಳೆಯರಿಗೆ ನೈಜ ಸ್ವಾತಂತ್ರ್ಯ, ಸಮಾನತೆ, ಗೌರವ ಮರೀಚಿಕೆಯಾಗಿಯೇ  ಉಳಿದಿದೆ. ಬದಲಾಗಿ ದಿನನಿತ್ಯ ಮಹಿಳೆಯರು ಗರ್ಭಾವಸ್ಥೆಯಿಂದ ಹಿಡಿದು ಮಸಣದವರೆಗೂ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾಳೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಸಂಖ್ಯೆ ಮಿತಿಮೀರಿದೆ. ಮೂರು ತಿಂಗಳ ಹಸುಗೂಸಿನಿಂದ ಹಿಡಿದು ವಯೋವೃದ್ಧರ ಮೇಲೂ ಕೂಡ ಅತ್ಯಾಚಾರ ಹಾಗೂ ಕೊಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸ್ತ್ರೀ ಭ್ರೂಣ  ಹತ್ಯೆ, ಮರ್ಯಾದೆಗೇಡು ಹತ್ಯೆ , ಆಸಿಡ್ ದಾಳಿ ಹಾಗೆಯೇ ಸರ್ಕಾರವೇ ಹೇಳುತ್ತಿರುವ ಸಮೀಕ್ಷೆಯಂತೆ ಇತ್ತೀಚೆಗಂತೂ ಬಾಲಗರ್ಭಿಣಿಯರ ಸಂಖ್ಯೆ ಸಮಾಜವನ್ನು ಆಘಾತಕ್ಕೀಡು ಮಾಡಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಸಾಂಸ್ಕೃತಿಕ ಅಧ:ಪತನ, ಅಶ್ಲೀಲ ಸಿನಿಮಾ-ಸಾಹಿತ್ಯ ಹಾಗೂ ಮದ್ಯ-ಮಾದಕ ವಸ್ತುಗಳು. ಸರ್ಕಾರ ಈ ಸಮಸ್ಯೆಗಳನ್ನ ಗಂಭೀರವಾಗಿ ಪರಿಗಣಿಸಿ ಅಶ್ಲೀಲತೆಗೆ ಕಡಿವಾಣ ಹಾಕಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಖಾತ್ರಿಪಡಿಸಬೇಕು.  ಜೊತೆಗೆ ಮಹಾನ್ ಚೇತನಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾಪುಲೆ, ಮೇರಿ ಕ್ಯೂರಿ ಅವರಂತಹ ಆದರ್ಶ ವ್ಯಕ್ತಿತ್ವಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು ಎನ್ನುತ್ತಾ, ಸಮಾಜದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸ್ತ್ರೀ-ಪುರುಷರು ಒಗ್ಗಟ್ಟಾಗಿ  ಧ್ವನಿ ಎತ್ತಿದರೆ ಮಾತ್ರ ಇಂತಹ ಮಹಿಳಾ ದಿನಾಚರಣೆಗಳು ನಿಜಕ್ಕೂ ಸಾರ್ಥಕವಾಗುತ್ತವೆ. ಇದು ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗಬಾರದು ಬದಲಿಗೆ ನಮ್ಮ ಮನೆ – ಮನಸ್ಸುಗಳನ್ನು ಹೊಕ್ಕು ಬದಲಾವಣೆಗೆ ನಾಂದಿ ಹಾಡಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಸನ್ನದ್ಧರಾಗೋಣ” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಎಂಎಸ್ಎಸ್ ನ ಜಿಲ್ಲಾ ಅಧ್ಯಕ್ಷರಾದ  ಶ್ರೀಮತಿ ಈಶ್ವರಿ ಕೆ.ಎಂ. ವಹಿಸಿದ್ದರು, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ವಿಜಯಲಕ್ಷ್ಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಎಐಎಂಎಸ್ಎಸ್ ನ ಪದಾಧಿಕಾರಿಗಳಾದ ಗಿರಿಜಾ, ವಿದ್ಯಾ, ರೇಖಾ, ಸೌಮ್ಯ ಜೆ.ವಿದ್ಯಾವತಿ, ವಿವಿಧ ಬಡಾವಣೆ ಹಾಗೂ ಹಳ್ಳಿಗಳಿಂದ ಬಂದ ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.