
ಪಡುಬಿದ್ರೆ, ಮೇ ೧೮: ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪಡುಬಿದ್ರೆ ಪೊಲೀಸರು ಇನ್ನಾ ಗ್ರಾಮದ ಕಜನಡ್ಕ ಪ್ರದೇಶದಲ್ಲಿ ಸೋಮವಾರ ಬಂಧಿಸಿದ್ದಾರೆ.
ನಡ್ಸಾಲು ಗ್ರಾಮದ ಅಲಂಗಾರ್ ರಸ್ತೆ ನಿವಾಸಿ ಇಸ್ಮಾಯಿಲ್(೪೨) ಹಾಗೂ ಮುಲ್ಕಿಯ ಕರ್ನಿರೆ ಮಸೀದಿ ಸಮೀಪದ ನಿವಾಸಿ ಕರ್ನಿರೆ ಮಹಮ್ಮದ್(೬೨) ಬಂಧಿತ ಆರೋಪಿಗಳಾಗಿದ್ದಾರೆ.
ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಸಾಗುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಿದ ವೇಳೆ ಅದರಲ್ಲಿದ್ದ ೩ ದನಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ವಾಹನ ಚಾಲಕ ಇಸ್ಮಾಯಿಲ್ ಹಾಗೂ ಮಹಮ್ಮದ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸರ ಪ್ರಕಾರ, ಇಸ್ಮಾಯಿಲ್ ವಿರುದ್ಧ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ೧, ಮುಲ್ಕಿ ಠಾಣೆಯಲ್ಲಿ ೩, ಬಂಟ್ವಾಳ ನಗರ ಠಾಣೆಯಲ್ಲಿ ೧, ಸುರತ್ಕಲ್ ಠಾಣೆಯಲ್ಲಿ ೧, ಕಾರ್ಕಳ ನಗರ ಠಾಣೆಯಲ್ಲಿ ೧ ಹಾಗೂ ಹೆಬ್ರಿ ಠಾಣೆಯಲ್ಲಿ ೨ ಪ್ರಕರಣಗಳು ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯಡಿ ದಾಖಲಾಗಿವೆ.
ವಶಪಡಿಸಿಕೊಂಡ ವಾಹನ ಹಾಗೂ ದನಗಳ ಒಟ್ಟು ಮೌಲ್ಯವನ್ನು ಸುಮಾರು ೪.೨೫ ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಎಸ್ಸೈ ಅನಿಲ್ ಕುಮಾರ್ ನೇತೃತ್ವದಲ್ಲಿ ಎಎಸ್ಸೈ ದಿನಕರ ಹಾಗೂ ಸಿಬ್ಬಂದಿಗಳಾದ ನವೀನ್ ಕುಮಾರ್, ಅಶ್ವಿನ್ ಕುಮಾರ್, ಕೃಷ್ಣ ಪ್ರಸಾದ್, ಸಂದೇಶ್, ಪ್ರಭು ಅಥಣಿ, ರಾಘವೇಂದ್ರ, ಅಣ್ಣಪ್ಪ ಮತ್ತು ಶ್ರೀಧರ್ ಭಾಗವಹಿಸಿದ್ದರು.





























