ಆಕಸ್ಮಿಕ ಬೆಂಕಿ ಗುಡಿಸಲು ಸಂಪೂರ್ಣ ಭಸ್ಮ

ಸಂಜೆವಾಣಿ ವಾರ್ತೆ

ಹೊಸಪೇಟೆ ಫೆ1:  ಹೊಸಪೇಟೆ ತಾಲೂಕಿನ ಮಲಪನಗುಡಿ ತಾಂಡದಲ್ಲಿ ಅಕಸ್ಮಾತ್ ಬೆಂಕಿ ಅವಘಡ ಸಂಭವಿಸಿ, ಗುಡಿಸಲೊಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಶುಕ್ರವಾರ (30)ರಂದು ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ನಡೆದಿದೆ.

ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಟಿವಿ, ಮಂಚ, ಘಡ್ರೆಜ್ನಲ್ಲಿದ್ದ ಬಟ್ಟೆ, ಮಕ್ಕಳ ಬೆಳ್ಳಿ ಗಡಾಗ, ಚೈನ್, 20ಗ್ರಾಂ ಬಂಗಾರ, ಮತ್ತು ಮಕ್ಕಳ ಪುಸ್ತಕಗಳು, ದ್ವಿಚಕ್ರ ವಾಹನ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಮನೆಯ ಮಾಲೀಕ ಲಕ್ಷ್ಮಣ ನಾಯ್ಕ್ ಪತ್ನಿ ತುಳಸಿಬಾಯಿ ತಿಳಿಸಿದ್ದಾರೆ.

ಲಕ್ಷ್ಮಣ ನಾಯ್ಕ್–ತುಳಸಿಬಾಯಿ ದಂಪತಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಮನೆ ಸಂಪೂರ್ಣ ನಾಶವಾದ ಹಿನ್ನೆಲೆಯಲ್ಲಿ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಕಣ್ಣೀರಿಡುತ್ತಾ ನೆರವಿಗಾಗಿ ಅವರು ಕೈಚಾಚಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಜಯನಗರ ಜಿಲ್ಲೆಯ ಶಾಸಕರಿಗೂ ವಿಷಯವನ್ನು ತಿಳಿಸಲಾಗಿದೆ. ಪೀಡಿತ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ಹಾಗೂ ನೆರವು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.