
ಮಂಗಳೂರು: ವಿಶ್ವಾದ್ಯಂತ ಸ್ತ್ರೀಯರನ್ನು ಆಡಳಿತ ದೂರವಿರಿಸಿದ ವ್ಯವಸ್ಥೆ ಇರುವಾಗ ಬಾಲ್ಯದಿಂದಲೇ ರಾಷ್ಟ್ರದ ಬಗ್ಗೆ ಸಾಮಾಜಿಕ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ ಹಲವಾರು ರಾಣಿಯರು ಸುಭಿಕ್ಷ ರಾಜ್ಯವ್ಯವಸ್ಥೆಯನ್ನು ಕಲ್ಪಿಸಿದ ವೀರ ರಾಣಿಯರ ನಾಡು ತುಳುವರದ್ದು. ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ಅಬ್ಬಕ್ಕನ ಬಗೆಗಿನ ಇತಿಹಾಸವನ್ನು ಪಠ್ಯದಲ್ಲಿ ಸೇರಿಸದೆ ಕೈ ಬಿಟ್ಟದ್ದು ವಿಪರ್ಯಾಸ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಮತ್ತು ನಗರದ ಡಾ. ದಯಾನಂದ ಪೈ ಮತ್ತು ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ಮಂಗಳೂರು ಇದರ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ಅಬ್ಬಕ್ಕ@೫೦೦ ಪ್ರೇರಣಾದಾಯಿ ಉಪನ್ಯಾಸ ಸರಣಿಯ ಎಸಳು-೯೪ನ್ನು ದೀಪ ಪ್ರಜ್ವಲನೆಯೊಂದಿಗೆ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ರಾಣಿ ಅಬ್ಬಕ್ಕ ನಾಡಿನ ಸ್ವಾಭಿಮಾನಕ್ಕಾಗಿ ೪ ದಶಕಗಳ ಕಾಲ ಹೋರಾಡಿ ೫೦೦ ವರ್ಷಗಳು ಸಂದಿವೆ. ಇಂದಿನ ಸಮಾಜದಸ್ವಾಸ್ಥ್ಯಕ್ಕಾಗಿ ೫೦೦ ಅಬ್ಬಕ್ಕರಾಗಿ ಬೆಳೆದು ಮುಂದೆ ಬರಲು ಸಿದ್ದರಾಗಬೇಕು ಎಂದರು.
ಲೇಖಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ತುಳುನಾಡಿನಲ್ಲಿ ೨೯ ರಾಣಿಯರು ದಕ್ಷ ಆಡಳಿತ ನಡೆಸಿದ ಇತಿಹಾಸದ ಪುರಾವೆ ಇದ್ದರೂ ನಮ್ಮವರಿಗೆ ಈ ಬಗ್ಗೆ ಅರಿವಿನ ಕೊರತೆ ಇತ್ತು. ಆದಾಗ್ಯೂ ಈ ಕಾಲಘಟ್ಟದಲ್ಲಿ ಇತ್ತೀಚಿಗೆ ಹೆಣ್ಣುಮಕ್ಕಳಲ್ಲಿ ಬೆಳೆಯುತ್ತಿರುವ ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿಯ ಬಗ್ಗೆ ಶ್ಲಾಘಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಯಕರ ಭಂಡಾರಿಯವರು ವಹಿಸಿದ್ದರು. ಕರ್ನಾಟಕ ಮಹಾ ವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಯೋಜಕರಾಗಿರುವ ಡಾ. ಸುಭಾಷಿಣಿ ಶ್ರೀವತ್ಸ ನಿರೂಪಿಸಿದರು. ಡಾ. ಜ್ಯೋತಿಪ್ರಿಯ ಪರಿಚಯಿಸಿ, ದೇವಿಪ್ರಸಾದ್ ವಂದಿಸಿದರು. ಯಕ್ಷಗಾನ ಹಾಗೂ ಜಾನಪದ ವಿದ್ವಾಂಸ ಭಾಸ್ಕರ ರೈ ಕುಕ್ಕುವಳ್ಳಿ, ಮಂಗಳೂರು ವಿಭಾಗದ ಕಾರ್ಯದರ್ಶಿ ರಾಜೇಶ್ ಮತ್ತಿತರರಿದ್ದರು.




























